ADVERTISEMENT

ಸೊರಬ: ಸದಾಶಿವ ಆಯೋಗದ ವರದಿ ಕೈಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 4:57 IST
Last Updated 25 ಸೆಪ್ಟೆಂಬರ್ 2021, 4:57 IST
ಸೊರಬದಲ್ಲಿ ತಾಲ್ಲೂಕು ಭೋವಿ ಕ್ಷೇಮಾಭಿವೃದ್ಧಿ ಸಂಘದಿಂದ ಸದಾಶಿವ ಆಯೋಗದ ವರದಿ ಕೈಬಿಡುವಂತೆ ಒತ್ತಾಯಿಸಿ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು
ಸೊರಬದಲ್ಲಿ ತಾಲ್ಲೂಕು ಭೋವಿ ಕ್ಷೇಮಾಭಿವೃದ್ಧಿ ಸಂಘದಿಂದ ಸದಾಶಿವ ಆಯೋಗದ ವರದಿ ಕೈಬಿಡುವಂತೆ ಒತ್ತಾಯಿಸಿ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು   

ಸೊರಬ: ಸದಾಶಿವ ಆಯೋಗದ ವರದಿ ಜಾರಿಗೊಳಿಸುವುದನ್ನು ಸರ್ಕಾರ ಕೈಬಿಡಬೇಕು ಎಂದು ಭೋವಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಜಯಪ್ಪ ಆಗ್ರಹಿಸಿದರು.

ತಾಲ್ಲೂಕು ಭೋವಿ, ಬಂಜಾರ ಉಪಜಾತಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಆಯೋಗದ ವರದಿ ಜಾರಿಯಾದರೆ ಭೋವಿ ಸಮಾಜ ಸೇರಿ ಇತರೆ ಉಪ ಜಾತಿಗಳ ನಡುವೆ ವೈಮನಸ್ಸು ಉಂಟಾಗುತ್ತದೆ. ಭೋವಿ ಮತ್ತಿತರ 101 ಉಪಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದ್ದು, ಆಯೋಗದ ವರದಿ ಪ್ರಕಾರ ಪರಿಶಿಷ್ಟ ಜಾತಿಯ ಎಡಗೈ ಮತ್ತು ಬಲಗೈ ಜಾತಿಗಳಿಗೆ ಶೇ 13ರಷ್ಟು ಮೀಸಲಾತಿ ನೀಡಿದರೆ, ಉಳಿದ ಶೇ 2ರಲ್ಲಿ 99 ಜಾತಿಗಳು ಮೀಸಲಾತಿಗಾಗಿ ಪೈಪೋಟಿ ನಡೆಸುವ ಅನಿವಾರ್ಯ ಎದುರಾಗಲಿದೆ. ಈ ವರದಿ ಅವೈಜ್ಞಾನಿಕವಾಗಿದ್ದು, ಕೂಡಲೇ ಸರ್ಕಾರ ಅನುಷ್ಠಾನಗೊಳಿಸುವುದನ್ನು ಕೈಬಿಡಬೇಕು. ಒಂದು ವೇಳೆ ಅನುಷ್ಠಾನಕ್ಕೆ ಮುಂದಾದರೆ ಎಲ್ಲ ಉಪ ಜಾತಿಗಳು ಸೇರಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.

ADVERTISEMENT

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಬಿಳವಾಣಿ ಮಾತನಾಡಿ, ‘ಆಳುವ ಸರ್ಕಾರ ಸಣ್ಣ ಸಣ್ಣ ಸಮುದಾಯದ ಹಿತ ಕಾಯುವುದನ್ನು ಬಿಟ್ಟು ರಾಜಕೀಯ ಲಾಭಕ್ಕಾಗಿ ಮೀಸಲಾತಿ ಹೆಸರಿನಲ್ಲಿ ಒಡೆದು ಕಲಹ ಸೃಷ್ಟಿಸುತ್ತಿವೆ. ಸದಾಶಿವ ಆಯೋಗದ ವರದಿ ಪ್ರಕಾರ ಎರಡು ಜಾತಿಗಳಿಗೆ ಗರಿಷ್ಠ ಪ್ರಮಾಣದಲ್ಲಿ ಮೀಸಲಾತಿ ಲಾಭವಾದರೆ ಉಳಿದ 99 ಉಪಜಾತಿಗಳಿಗೆ ಅನ್ಯಾಯವಾಗಲಿದೆ’ ಎಂದರು.

ಸರ್ಕಾರ ಸಣ್ಣ ಸಮುದಾಯಗಳನ್ನು ಪರಿಗಣಿಸಿ ಇಂತಹ ಜನವಿರೋಧಿ ವರದಿಗಳನ್ನು ತಿರಸ್ಕರಿಸಿ ಜನಪರವಾದ ನೀತಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಉದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನಸ್ವಿ, ಚಂದ್ರಶೇಖರ್, ಕೃಷ್ಣಮೂರ್ತಿ, ಧರ್ಮನಾಯಕ್, ದೇವರಾಜ, ಮೇಘರಾಜ, ಕಿರಣ, ಓಂಕಾರಪ್ಪ, ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.