ಕಾಳೇನಹಳ್ಳಿ (ಶಿಕಾರಿಪುರ): ಶರಣ, ಸಂತರಿಗೆ ಹಾಗೂ ತಪಸ್ವಿಗಳಿಗೆ ಜನ್ಮನೀಡಿದ ಪುಣ್ಯಭೂಮಿ ಶಿಕಾರಿಪುರ ತಾಲ್ಲೂಕು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು.
ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದ ಶಿವಯೋಗಾಶ್ರಮದಲ್ಲಿ ಈಚೆಗೆ ನೂತನ ಶಿವಯೋಗ ಮಂದಿರ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
‘ನಾಡಿನಲ್ಲಿ ಮಠಗಳು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿವೆ. ದಿ.ರುದ್ರಮುನಿ ಸ್ವಾಮೀಜಿ ಅವರು ಪೀಠಾಧ್ಯಕ್ಷರಾಗಿದ್ದ ಸಂದರ್ಭದಿಂದ ಈ ಮಠಕ್ಕೆ ಬಂದು ಆಶೀರ್ವಾದ ಪಡೆಯುತ್ತಿದ್ದೇನೆ. ನೂತನ ಪೀಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ಈ ಕ್ಷೇತ್ರಕ್ಕೆ ಆಗಮಿಸಿರುವುದು ಮಠದ ಅಭಿವೃದ್ಧಿಗೆ ಪೂರಕವಾಗಿದೆ’ ಎಂದರು.
‘ಫೆ.27ರಂದು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸುಮಾರು ₹ 7000 ಕೋಟಿ ಅಭಿವೃದ್ಧಿ ಕಾಮಗಾರಿಗೆ ಮೋದಿ ಚಾಲನೆ ನೀಡಲಿದ್ದಾರೆ. ರಾಜ್ಯದಲ್ಲಿಯೇ ಶಿಕಾರಿಪುರ ತಾಲ್ಲೂಕು ಮಾದರಿ ತಾಲ್ಲೂಕಾಗಿಸಲು ಶ್ರಮಿಸಿದ್ದೇನೆ’ ಎಂದರು.
ಕಾಳೇನಹಳ್ಳಿ ಶಿವಯೋಗಾಶ್ರಮದ ಪೀಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಯೋಗಿ ಜಗದೀಶನಾಥ ಸ್ವಾಮೀಜಿ, ವಿಧಾನಪರಿಷತ್ ಸದಸ್ಯ ರುದ್ರೇಗೌಡ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಚ್.ಟಿ. ಬಳಿಗಾರ್, ಶಿವಯೋಗಾಶ್ರಮ ಆಡಳಿತಾಧಿಕಾರಿ ಹಿರೇಮಠ್, ಮುಖಂಡರಾದ ಅಂಬಾರಗೊಪ್ಪ ಶೇಖರಪ್ಪ, ಚುರ್ಚಿಗುಂಡಿ ರುದ್ರಮುನಿ, ಎನ್.ವಿ. ಈರೇಶ್, ಕೆ.ಜಿ. ಶಿವಪ್ಪಯ್ಯ, ರುದ್ರಪ್ಪಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.