ಶಿವಮೊಗ್ಗ: ಪ್ರಧಾನಿ ಮೋದಿ ಅವರು ಪದೇ ಪದೆ ಪಾಕಿಸ್ತಾನದ ಹೆಸರು ಪ್ರಸ್ತಾಪಿಸುತ್ತಿರುವ ಕಾರಣ ಲೋಕಸಭಾ ಚುನಾವಣೆ ನಡೆಯುತ್ತಿರುವುದು ಭಾರತದಲ್ಲೋ, ಪಾಕ್ನಲ್ಲೋ ಎಂಬ ಅನುಮಾನ ಮೂಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಛೇಡಿಸಿದರು.
ಈ ಬಾರಿ ಭಾರತದಲ್ಲಿ ಬಿಜೆಪಿ ಗೆಲ್ಲಬೇಕು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೇ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಆದರೂ, ಮೋದಿ ಪಾಕ್ ಹೆಸರು ಪ್ರಸ್ತಾಪಿಸುವ ಮೂಲಕ ದೇಶದ ಯುವಕರನ್ನು ಭಾವನಾತ್ಮಕ ನೆಲೆಗಟ್ಟಿನಲ್ಲಿ ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ಬಿಜೆಪಿ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ. ಸದ್ಯ ಚುನಾವಣಾ ಆಯೋಗ ನಮೋ ಟಿವಿ, ಪಿಎಂ ನರೇಂದ್ರ ಮೋದಿ ಚಿತ್ರಕ್ಕೆ ಕಡಿವಾಣ ಹಾಕಿದೆ. ಬಹುಶಃ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರಿಗೂ ಅರ್ಥ ಆಗಿರಬೇಕು ಎಂದು ಕುಟುಕಿದರು.
ರಫೇಲ್ ಯುದ್ಧ ವಿಮಾನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಾಧ್ಯಮ ಸ್ವಾತಂತ್ರ್ಯ ಎತ್ತಿಹಿಡಿದಿದೆ. ಒಂದು ವೇಳೆ ಸುಪ್ರೀಂ ನಿರ್ದೇಶನದಂತೆ ವಿಚಾರಣೆ ನಡೆದರೆ ಮೋದಿ ಜೈಲಿಗೆ ಹೋಗುವುದು ಖಚಿತ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.