ಭದ್ರಾವತಿ: ’ಉಕ್ಕಿನ ನಗರಿ ಶ್ರೇಯವು ಭದ್ರಾವತಿಗೆ ಶಾಶ್ವತವಾಗಿ ಉಳಿಯಬೇಕು. ಆ ನಿಟ್ಟಿನಲ್ಲಿ ವಿಐಎಸ್ಎಲ್ ಕಾರ್ಖಾನೆ ಉಳಿಸುವಂತೆ ಬಿಜೆಪಿ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿ ಮನವಿ ಮಾಡಿದ್ದೇನೆ‘ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ವಿಐಎಸ್ಎಲ್ ಕಾರ್ಖಾನೆ ಉಳಿಸುವಂತೆ ಒತ್ತಾಯಿಸಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಅವರು ಮಾತನಾಡಿದರು.
‘ನಿಮ್ಮ (ಕಾರ್ಮಿಕರ) ಪ್ರಯತ್ನ ಹಾಗೂ ಸಂಕಲ್ಪಕ್ಕೆ ಭಗವಂತನ ಅನುಗ್ರಹ ದೊರೆಯಬೇಕು. ಆಕಸ್ಮಿಕವಾಗಿ ಬಿಜೆಪಿ ರಾಷ್ಟ್ರೀಯ ನಾಯಕರು ಭೇಟಿ ನೀಡಿದ್ದರು. ಅವರಿಗೆ ನಿಮ್ಮ ದುಃಖ ಮನವರಿಕೆ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿ ಕಾರ್ಖಾನೆ ಉಳಿಸಿಕೊಡುವಂತೆ ಮನವಿ ಮಾಡಿದ್ದೇನೆ’ ಎಂದರು.
‘ಈ ಭಾಗದ ಜನಪ್ರತಿನಿಧಿಗಳು ಹಾಗೂ ಸರ್ಕಾರ ವಿಶೇಷ ಗಮನಹರಿಸಿ ಕೆಳವರ್ಗದ ಮಂದಿಯ ಬದುಕು ಮೂರಾಬಟ್ಟೆ ಆಗದಂತೆ ನೋಡಿಕೊಳ್ಳಬೇಕಿದೆ. ಎಲ್ಲರಿಗೂ ನೆಮ್ಮದಿಯ ಬದುಕು ಕೊಡಲು ವಿಶೇಷ ಮುತುವರ್ಜಿ ಹಾಗೂ ಕಾಳಜಿ ತೆಗೆದು ಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡುವೆ. ಎಲ್ಲರಿಗೂ ಶ್ರೇಯಸ್ಸು ಬಯಸಿ ಪ್ರಾರ್ಥಿಸುವೆ’ ಎಂದರು.
‘ಕಾರ್ಖಾನೆ ಮುಚ್ಚಬಾರದು ಎಂದು ನಾನು ಕೂಡ ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ನಿಮ್ಮ ಜೊತೆ ನಾನಿದ್ದೇನೆ’ ಎಂದು ಹೋರಾಟ ನಿರತರಿಗೆ ಹಾಗೂ ಭದ್ರಾವತಿ ಜನಕ್ಕೆ ಪೇಜಾವರ ಸ್ವಾಮೀಜಿ ಧೈರ್ಯ ತುಂಬಿದರು. ಪೇಜಾವರ ಸ್ವಾಮೀಜಿ ಅವರೊಂದಿಗೆ ಬಿಳಕಿ ಮಠದ ರಾಚೋಟೇಶ್ವರ ಸ್ವಾಮೀಜಿ ಇದ್ದರು.
ಫೆ.24ಕ್ಕೆ ಭದ್ರಾವತಿ ಬಂದ್ಗೆ ನಿರ್ಧಾರ
ಭದ್ರಾವತಿ: ವಿಐಎಸ್ಎಲ್ ಉಳಿಸಿ ಹೋರಾಟವನ್ನು ತೀವ್ರಗೊಳಿಸಲು ಫೆಬ್ರುವರಿ 24ರಂದು ಭದ್ರಾವತಿ ಬಂದ್ ನಡೆಸಲು ತೀರ್ಮಾನಿಸಲಾಗಿದೆ. ಶಾಂತಿಯುತ ಹಾಗೂ ಸ್ವಯಂಪ್ರೇರಿತ ಬಂದ್ ಇದಾಗಿರಲಿದೆ ಎಂದು ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್.ಜಿ.ಸುರೇಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಂದ್ ದಿನ ವಿಐಎಸ್ಎಲ್ ಮುಖ್ಯದ್ವಾರದಿಂದ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಬಂದ್ಗೆ ನಗರದ ವರ್ತಕರ ಸಂಘ, ಕ್ರೈಸ್ತರ ಸಂಘ, ಆಟೊ ಚಾಲಕರ ಸಂಘ ಸೇರಿ ಹಲವು ಸಂಘ–ಸಂಸ್ಥೆಗಳು ಬೆಂಬಲ ಸೂಚಿಸಿವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.