ADVERTISEMENT

ರಾಜಕಾರಣಿಗಳಿಗೂ ರಂಗ ತರಬೇತಿ ಅಗತ್ಯ

ಹಿರಿಯ ರಂಗಕರ್ಮಿ ಮಂಡ್ಯ ರಮೇಶ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2023, 6:07 IST
Last Updated 19 ಜನವರಿ 2023, 6:07 IST
ತೀರ್ಥಹಳ್ಳಿಯಲ್ಲಿ ಬುಧವಾರ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪ್ರಸಾದನ ಶಿಕ್ಷಕ ಪುರುಷೋತ್ತಮ ತಲವಾಟ ಅವರಿಗೆ ನಟಮಿತ್ರರು ಕಲಾ ಸಂಘದಿಂದ ರಂಗ ಗೌರವ ಅರ್ಪಿಸಲಾಯಿತು.
ತೀರ್ಥಹಳ್ಳಿಯಲ್ಲಿ ಬುಧವಾರ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪ್ರಸಾದನ ಶಿಕ್ಷಕ ಪುರುಷೋತ್ತಮ ತಲವಾಟ ಅವರಿಗೆ ನಟಮಿತ್ರರು ಕಲಾ ಸಂಘದಿಂದ ರಂಗ ಗೌರವ ಅರ್ಪಿಸಲಾಯಿತು.   

ತೀರ್ಥಹಳ್ಳಿ: ಭಾಷೆಯನ್ನು ಚೆಂದವಾಗಿ ಗ್ರಹಿಸಿಕೊಳ್ಳಲು ರಂಗಭೂಮಿ ಪ್ರಕಾರಗಳು ಮುಖ್ಯವಾಗಿದೆ. ಎಲ್ಲ ರಾಜಕಾರಣಿಗಳಿಗೂ ರಂಗಭೂಮಿ ತರಬೇತಿ ಅಗತ್ಯ ಎಂದು ಹಿರಿಯ ರಂಗಕರ್ಮಿ ಮಂಡ್ಯ ರಮೇಶ್ ಪ್ರತಿಪಾದಿಸಿದರು.

ಬುಧವಾರ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಟಮಿತ್ರರು ಹವ್ಯಾಸಿ ಸಂಘ, ಕೇಂದ್ರ ಸಂಸ್ಕೃತಿ ಸಚಿವಾಲಯ, ಶಿವಮೊಗ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿರುವ ಬಹುಭಾಷೀ ರಾಷ್ಟ್ರೀಯ ರಂಗೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವೀಯತೆ ಬೆಳೆಸುವ ರಂಗಭೂಮಿ ಯಾರೊಂದಿಗೆ ಎಷ್ಟು ಸೌಜನ್ಯಯುತವಾಗಿ ಮಾತನಾಡಬೇಕು ಎಂಬ ಸಾಹಿತ್ಯ ಅರ್ಥೈಸಿಕೊಳ್ಳುವ ಮನುಷ್ಯತ್ವ ಜಾಗೃತಗೊಳಿಸುತ್ತದೆ. ಪರಸ್ಪರರ ನಂಬಿಕೆ, ವಿಶ್ವಾಸದಿಂದ
ಪ್ರವರ್ಧಮಾನಕ್ಕೆ ಬರಲು ಸಹಕಾರಿಯಾಗಿದೆ ಎಂದು ಹೇಳಿದರು.

ADVERTISEMENT

ಪ್ರಾರ್ಥಮಿಕ ಶಿಕ್ಷಣದಿಂದಲೇ ನಾಟಕ ಕಲಿಕೆ ಬೌದ್ಧಿಕ ವಿಕಸನಕ್ಕೆ ಪೂರಕವಾಗಿದೆ. ಅಭಿವೃದ್ಧಿಶೀಲ ಸಮಾಜಕ್ಕೆ ಕಲ್ಯಾಣ, ಸಭಾ ಮಂಟಪಗಳಿಗಿಂತ ರಂಗಮಂದಿರ ಮುಖ್ಯ. ಯಾವುದೇ ಸಿದ್ಧಾಂತಕ್ಕೆ ಅಂಟಿಕೊಳ್ಳದೇ ಸಾರ್ಥಕ ಮನೋಭಾವ ಶುದ್ಧಿಗೊಳಿಸುತ್ತದೆ. ಅದಕ್ಕೆ ನಟಮಿತ್ರರು ಅಧ್ಯಕ್ಷ ಸಂದೇಶ್‌ ಜವಳಿ ಉತ್ತಮ ನಿದರ್ಶನ ಎಂದರು.

‘ರಂಗಭೂಮಿ ಜಾತಿ ಧರ್ಮವನ್ನು ಮೀರಿದೆ. ಎಲ್ಲ ವರ್ಗಗಳಿಗೂ ಸಮಾನವಾದ ಅವಕಾಶ ಕಲ್ಪಿಸುತ್ತದೆ. ಸಾಧನೆ ಶೂನ್ಯದಿಂದ
ಆರಂಭಗೊಳ್ಳುತ್ತದೆ. ಕೀಳರಿಮೆಯಿಂದ ಸಮಾಜ ಹೊರಬರಬೇಕಿದೆ’ ಎಂದು ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಜೀವನ್ ರಾಮ್ ಸುಳ್ಯ ಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪುರುಷೋತ್ತಮ ತಲವಾಟ ಅವರಿಗೆ ರಂಗ ಗೌರವ ಅರ್ಪಿಸಲಾಯಿತು. ರಂಗಾಯಣ ನಿರ್ದೇಶಕ ಸಂದೇಶ್ ಜವಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೃಹಸಚಿವ ಆರಗ ಜ್ಞಾನೇಂದ್ರ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲ ಶೆಟ್ಟಿ, ಚಲನಚಿತ್ರ ನಿರ್ದೇಶಕರಾದ ಡಾ. ಗಿರೀಶ್ ಕಾಸರವಳ್ಳಿ, ಪಿ. ಶೇಷಾದ್ರಿ, ಸಾಹಿತಿ ಗೋಪಾಲಕೃಷ್ಣ ಪೈ ಇದ್ದರು. ‘ಪರಶುರಾಮ’ ನಾಟಕ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.