ADVERTISEMENT

ಶಿವಮೊಗ್ಗ: ಶಿಕ್ಷಕ ವಿದ್ಯಾರ್ಥಿಯ ಭುಜದ ಮೂಳೆ ಮುರಿದ ಪ್ರಕರಣಕ್ಕೆ ಹೊಸ ತಿರುವು

ಶಿಕ್ಷಕರ ವಿರುದ್ಧ ನೀಡಿದ್ದ ದೂರು ವಾಪಾಸ್ ಪಡೆದ ಪೋಷಕರು

​ಪ್ರಜಾವಾಣಿ ವಾರ್ತೆ
Published 14 ಜನವರಿ 2019, 13:02 IST
Last Updated 14 ಜನವರಿ 2019, 13:02 IST
   

ಶಿವಮೊಗ್ಗ:ಶಿಕ್ಷಕ ಹೊಡೆದ ಪರಿಣಾಮ ಇಲ್ಲಿನ ದುರ್ಗಿಗುಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಯ ಭುಜದ ಮೂಳೆ ಮುರಿದ್ದ ಪ್ರಕರಣ ಹೊಸ ತಿರುವು ಪಡೆದಿದೆ.

ಥಳಿಸಿದ ಶಿಕ್ಷಕ ಪರಮೇಶ್ವರಪ್ಪ ವಿರುದ್ಧ ವಿದ್ಯಾರ್ಥಿ ಪೋಷಕರು ಜಯನಗರ ಠಾಣೆಗೆ ದೂರು ನೀಡಿದ್ದರು. ಈ ವಿಚಾರವಾಗಿ ಪೊಲೀಸರು, ಡಿಡಿಪಿಐ, ಬಿಇಒ ಹಾಗೂ ಶಾಲೆಯ ಎಸ್‌ಡಿಎಂಸಿ ವಿಚಾರಣೆ ನಡೆಸಿದಾಗ ಹೊರಗಿನ ವ್ಯಕ್ತಿಗಳು ಬಲವಂತವಾಗಿ ಠಾಣೆಗೆ ಕರೆದುಕೊಂಡು ಹೋಗಿ ದೂರು ಕೊಡಿಸಿದ್ದ ಅಂಶ ಬಹಿರಂಗವಾಗಿದೆ.

ಹಿಂದೆ ಅದೇ ಶಾಲೆಯ ಶಿಕ್ಷಕಿ 3ನೇ ತರಗತಿ ವಿದ್ಯಾರ್ಥಿಯೊಬ್ಬರಿಗೆ ಬಸ್ಕಿ ಹೊಡೆಸಿದ್ದಕ್ಕೆ ಎಫ್‌ಐಆರ್ ದಾಖಲಿಸಿದ್ದ ಸಂಜೀವ್ ಕುಮಾರ್ ಅವರೇ ಆಮಿಷ ಒಡ್ಡಿ ದೂರು ಕೊಡಿಸಿದ್ದರು ಎಂದು ವಿದ್ಯಾರ್ಥಿ, ಪೋಷಕರು ಲಿಖಿತ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಶಿಕ್ಷಕ ಪರಮೇಶ್ವರಪ್ಪ ವಿರುದ್ಧ ನೀಡಿದ್ದ ದೂರು ವಾಪಸ್‌ ಪಡೆದ್ದಾರೆ.

ADVERTISEMENT

‘ಹೋಂವರ್ಕ್ ನೀಟಾಗಿ ಮಾಡಿಲ್ಲವೆಂದು ಶಿಕ್ಷಕರು ವಿದ್ಯಾರ್ಥಿಗೆ ಸ್ಕೇಲ್‌ನಲ್ಲಿ ಹೊಡೆಯಲು ಹೋದಾಗ ತುಂಟತನದಿಂದ ತಪ್ಪಿಸಿಕೊಳ್ಳಲು ಹೋಗಿ ಬೆಂಚಿಗೆ ಬಡಿಸಿಕೊಂಡು ಗಾಯವಾಗಿತ್ತು. ಎಲ್ಲ ಚಿಕಿತ್ಸಾ ವೆಚ್ಚವನ್ನು ಶಿಕ್ಷಕರೇ ಭರಿಸಿದ್ದಾರೆ. ದೂರು ನೀಡಿದ್ದಕ್ಕೆ ಪೋಷಕರೂ ವಿಷಾದ ವ್ಯಕ್ತಪಡಿಸಿದ್ದಾರೆ. ದೂರು ಹಿಂಪಡೆದಿದ್ದಾರೆ. ಹುಡುಗ ಮತ್ತೆ ಶಾಲೆಗೆ ಬರುತ್ತಿದ್ದಾನೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷೆ ಎಚ್‌.ಎಂ. ಪೂರ್ಣಿಮಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.