ಶಿವಮೊಗ್ಗ: ಗಾಂಜಾ, ಅಫೀಮುಗಳ ದುಷ್ಪರಿಣಾಮವನ್ನು ಬಿಂಬಿಸುವ ‘ದುಷ್ಮನ್’ ಚಿತ್ರ ಸೆಟ್ಟೇರಿದೆ. ಭಾನುವಾರ ಕೋಟೆ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಕಲಗೋಡು ರತ್ನಾಕರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದರು.
ಚಿತ್ರವು ಯುವ ಜನಾಂಗದ ದುಶ್ಚಟಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಉತ್ತಮ ಸಂದೇಶ ಸಾರುವ ಚಿತ್ರವಾಗಿದೆ. ಶಿವಮೊಗ್ಗದ ನಟ, ನಟಿಯರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಂತೋಷದ ವಿಷಯ. ಚಿತ್ರ ಯಶಸ್ಸು ಕಾಣಲಿ ಎಂದು ಅವರು ಶುಭ ಹಾರೈಸಿದರು.
ಕಾರ್ಯಕಾರಿ ನಿರ್ಮಾಪಕ ಎಚ್.ಎನ್. ಮಂಜುನಾಥ್ ಮಾತನಾಡಿ, ‘ಚಿತ್ರೀಕರಣ ಶಿವಮೊಗ್ಗದ ಸುತ್ತಮುತ್ತ ಇನ್ನೂ 15 ದಿನಗಳ ಕಾಲ ನಡೆಯಲಿದೆ. ನಾಯಕ, ನಾಯಕಿ ಹೊಸಬರಾದರೂ ತುಂಬಾ ಅದ್ಭುತವಾಗಿ ನಟಿಸುತ್ತಿದ್ದಾರೆ. ಗಾಂಜಾ, ಅಫೀಮುಗಳನ್ನು ಸಂಪೂರ್ಣವಾಗಿ ತೊಡೆದುಹಾಕುವ ಸಂದೇಶವನ್ನು ಈ ಚಿತ್ರದ ಮೂಲಕ ನೀಡಲಾಗುತ್ತಿದೆ. ಶೀಘ್ರವೇ ಬಿಡುಗಡೆಯಾಗುವ ನಿರೀಕ್ಷೆ ಇದೆ’ ಎಂದರು.
ನಿರ್ದೇಶಕ ಮುತ್ತು ಮಾತನಾಡಿ, ‘ಶಿವಮೊಗ್ಗದಲ್ಲಿ ಚಿತ್ರೀಕರಣವಾಗುತ್ತಿರುವುದು ತುಂಬಾ ಸಂತೋಷವಾಗಿದೆ. ಇಲ್ಲಿ ಸಾಂಸ್ಕೃತಿಕ ವಾತಾವರಣವಿದ್ದು, ಜೋಗ ಸೇರಿ ಜಿಲ್ಲೆಯ ಐತಿಹಾಸಿಕ ಸ್ಥಳಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
‘ದುಷ್ಮನ್' ಚಿತ್ರದ ಹಲವು ಭಾಗಗಳು ಕೋಟೆ ಶ್ರೀ ರಾಮಾಂಜನೇಯ ದೇವಾಲಯದಲ್ಲಿ ಚಿತ್ರೀಕರಣಗೊಂಡಿದ್ದು, ಹಾಸ್ಯನಟ ರಂಗಾಯಣ ರಘು ಸೇರಿದಂತೆ ಹಲವು ಹೆಸರಾಂತ ಕಲಾವಿದರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಟ ಕೆಂಪೇಗೌಡ ಚಿತ್ರದ ಪ್ರಮುಖ ಹಾಸ್ಯ ಕಲಾವಿದರಾಗಿದ್ದಾರೆ.
ಪತ್ರಕರ್ತರಾದ ರಂಜಿತ್, ಅರುಣ್, ಭೀಮರಾವ್ ಸೇರಿ ಶಿವಮೊಗ್ಗದ ಹಲವು ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ಜನನಿ, ಚಿತ್ರ ಹೊನ್ನಪ್ಪ, ನಟ ಜೀವನ್ ಕುಮಾರ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.