ADVERTISEMENT

₹ 5 ಕೋಟಿ ವೆಚ್ಚದಲ್ಲಿ ಈಡಿಗ ಭವನ: ಕುಮಾರ್ ಬಂಗಾರಪ್ಪ

ಸೊರಬದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 4:54 IST
Last Updated 28 ಮಾರ್ಚ್ 2021, 4:54 IST
ಸೊರಬದಲ್ಲಿ ಶನಿವಾರ ಶಾಸಕ ಕುಮಾರ್ ಬಂಗಾರಪ್ಪ ಈಡಿಗ ಸಮುದಾಯ ಭವನಕ್ಕೆ ಮಂಜೂರಾಗಿರುವ ಜಮೀನನ್ನು ಪರಿಶೀಲಿಸಿದರು
ಸೊರಬದಲ್ಲಿ ಶನಿವಾರ ಶಾಸಕ ಕುಮಾರ್ ಬಂಗಾರಪ್ಪ ಈಡಿಗ ಸಮುದಾಯ ಭವನಕ್ಕೆ ಮಂಜೂರಾಗಿರುವ ಜಮೀನನ್ನು ಪರಿಶೀಲಿಸಿದರು   

ಸೊರಬ: ತಾಲ್ಲೂಕಿನಲ್ಲಿರುವ ಬಹುಸಂಖ್ಯಾತ ಈಡಿಗ ಸಮುದಾಯದ ಅಭಿವೃದ್ಧಿಗಾಗಿ ಸ್ವಂತ ಕಟ್ಟಡ ಹೊಂದಿಲ್ಲದಿರುವುದು ನೋವಿನ ಸಂಗತಿ. 3 ವರ್ಷಗಳ ಹಿಂದೆ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಮಂಜೂರಾತಿ ದೊರೆತಿದೆ. ₹15 ಕೋಟಿ ವೆಚ್ಚದಲ್ಲಿ ಸಮುದಾಯ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.

ಶನಿವಾರ ಪಟ್ಟಣದ ಸರ್ವೆ ನಂ.111ರಲ್ಲಿ ನಿರ್ಮಾಣವಾಗಲಿರುವ ಈಡಿಗ ಸಮುದಾಯ ಭವನದ ನಿವೇಶನದ ಜಾಗವನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಸರ್ವೆ ನಂ. 111ರಲ್ಲಿ ಈಡಿಗ ಸಮುದಾಯ ಭವನ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗೆ 5 ಎಕರೆ ಜಮೀನು ಮಂಜೂರಾಗಿದೆ. ಮೊದಲ ಹಂತದಲ್ಲಿ ಸಮುದಾಯ ಭವನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲಿಖಿತವಾಗಿ ₹ 2 ಕೋಟಿ ಅನುದಾನ ನೀಡಿರುವುದು ಸ್ವಾಗತಾರ್ಹ. ಸಮಾಜದ ಅಭಿವೃದ್ಧಿಗೆ ಎಲ್ಲರೂ ಸಾಂಘಿಕವಾಗಿ ಶ್ರಮಿಸುವ ಮೂಲಕ ರಾಜ್ಯದಲ್ಲಿಯೇ ಮಾದರಿ ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗೋಣ’ ಎಂದು ತಿಳಿಸಿದರು.

ADVERTISEMENT

ಸುಸಜ್ಜಿತ ಕಟ್ಟಡ, ಸಾವಿರಾರು ಜನರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಸೇರಿ ಅಗತ್ಯ ಮೂಲಸೌಕರ್ಯದ ನೀಲನಕ್ಷೆ ಸಿದ್ಧಪಡಿಸುವಂತೆ ಎಂಜನಿಯರ್‌ಗೆ ಸೂಚಿಸಿದರು.

ತಾಲ್ಲೂಕು ಆರ್ಯ ಈಡಿಗ ಸಮಾಜದ ಅಧ್ಯಕ್ಷ ಕೆ.ಅಜ್ಜಪ್ಪ, ‘ಸಮಾಜದವರ ಬಹುದಿನಗಳ ಕನಸು ಈಡೇರಿದೆ. ತಾಲ್ಲೂಕಿನಾದ್ಯಂತ ಸಮಾಜದ ಮುಖಂಡರಿಂದ ಎಲ್ಲ ರೀತಿಯ ಸಹಕಾರ ಪಡೆದು ಸಮಾಜವನ್ನು ಸಂಘಟಿಸಲಾಗುತ್ತಿದೆ. ಸಮುದಾಯ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕ ಕುಮಾರ್ ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಸಹಕಾರ ನೀಡಿದ್ದಾರೆ’ ಎಂದರು.

ಈಡಿಗ ಸಮಾಜದ ಉಪಾಧ್ಯಕ್ಷ ಜಿ.ಡಿ.ನಾಯ್ಕ್, ಕಾರ್ಯದರ್ಶಿ ಎಂ.ಡಿ.ಶೇಖರ್, ಪುರಸಭೆ ಅಧ್ಯಕ್ಷ ಎಂ.ಡಿ. ಉಮೇಶ್, ಉಪಾಧ್ಯಕ್ಷ ಮಧುರಾಯ್ ಶೇಟ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜೆ.ಶಿವಾನಂದಪ್ಪ, ಭೋಗೇಶ್ ಶಿಗ್ಗಾ, ಟಿ.ಆರ್. ಸುರೇಶ್, ನಾಗರಾಜ್ ಚಿಕ್ಕಸವಿ, ಬರಗಿ ನಿಂಗಪ್ಪ, ಮಹಾದೇವಪ್ಪ, ಡಾಕಪ್ಪ, ಯಲಸಿ ಹನುಮಂತಪ್ಪ, ಗುರುಮೂರ್ತಿ ಓಟೂರು, ಪಕ್ಕೀರಪ್ಪ ಮಾಕೊಪ್ಪ, ನಿಂಗಪ್ಪ ಗುಂಡಶೆಟ್ಟಿಕೊಪ್ಪ, ಮಣ್ಣತ್ತಿ ಪರಮೇಶ್ವರಹಾಗೂ ಈಡಿಗ ಸಮಾಜದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.