ADVERTISEMENT

ರೈತರ ಕಾಳಜಿ‌ ಮರೆತ ಸರ್ಕಾರ: ಕೋಡಿಹಳ್ಳಿ‌ ಚಂದ್ರಶೇಖರ್

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 7:07 IST
Last Updated 6 ನವೆಂಬರ್ 2025, 7:07 IST
ಸೊರಬ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು 
ಸೊರಬ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು    

ಸೊರಬ: ‘ರೈತಪರ ಕಾಳಜಿ ಮರೆತ ಸರ್ಕಾರ ಕೇವಲ ಭರವಸೆ ನೀಡಿ ರೈತರ ಹಕ್ಕನ್ನು ಕಸಿಯುವ ಕೆಲಸ‌ ಮಾಡುತ್ತಿದೆ. ಕೊಟ್ಟ ಮಾತಿಗೆ ಬದ್ಧವಾಗಿರಬೇಕು.‌ ಇಲ್ಲವಾದಲ್ಲಿ ಭವಿಷ್ಯದಲ್ಲಿ ರಾಜಕೀಯ ಅಂತ್ಯ ಕಾಣುವ ಸ್ಥಿತಿ ಬಂದೊದಗಲಿದೆ’ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ‌ ಚಂದ್ರಶೇಖರ್ ಎಚ್ಚರಿಸಿದರು.‌

ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಬುಧವಾರ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆಯಿಂದ ರೈತರ ಸಮಸ್ಯೆಗಳ ಕುರಿತು ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಅರಣ್ಯವನ್ನು‌ ಕಾಪಾಡಿಕೊಳ್ಳಲು‌ ಅಧಿಕಾರಿಗಳಿಗೆ ಕಾನೂನು ಅರಿವು ಬೇಕಿದೆ. ಅದನ್ನು‌ ಬಿಟ್ಟು ಬಗರ್‌ಹುಕುಂ ರೈತರನ್ನು ಒಕ್ಕಲೆಬ್ಬಿಸುವ ಮೂಲಕ ರೈತ ವಿರೋಧಿ‌ ನೀತಿ ಅನುಸರಿಸುವುದು ಸರಿಯಲ್ಲ. ಭೂ ಒತ್ತುವರಿ ಮಾಡಿದ ಕಾರ್ಪೊರೇಟ್ ಕಂಪನಿಗಳನ್ನು ಕೈ ಬಿಟ್ಟು ಸಣ್ಣ ಹಿಡುವಳಿದಾರರ ಮೇಲೆ ಸರ್ಕಾರ ದರ್ಪ ತೋರುತ್ತಿದ್ದು, ರೈತರನ್ನು ಒಕ್ಕಲೆಬ್ಬಿಸುವ ನಡೆ ಖಂಡನೀಯ’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ ಪರವಾನಗಿ ಇಲ್ಲದ 650 ಅನಧಿಕೃತ ಫುಡ್ ಇಂಡಸ್ಟ್ರೀಸ್ ಕಂಪನಿಗಳು ತಲೆ ಎತ್ತಿವೆ. ಅಂತಹ ಕಂಪನಿಗಳಿಗೆ ಮರಗಳು‌ ಸಾಗಾಟವಾಗುತ್ತಿರುವುದು ಯಾವುದೇ ಉದ್ಯಾನದಿಂದಲ್ಲ. ಅಂತವರ ಮೇಲೆ ಕ್ರಮ‌ ಕೈಗೊಳ್ಳುವ ಬದಲು ಬಗರ್‌ಹುಕುಂ ಹಿಡುವಳಿದಾರರ ಹಾಗೂ ಅರಣ್ಯ ಭೂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಿಲು ಸರ್ಕಾರ ಮುಂದಾಗಿದೆ’ ಎಂದು ದೂರಿದರು.

‘ಮಾಜಿ‌ ಮಖ್ಯಂಮತ್ರಿ ಎಸ್. ಬಂಗಾರಪ್ಪ ರೈತರ ಹಿತಕ್ಕಾಗಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡಿದ್ದರು. ಆದರೆ, ಇದೀಗ‌ 10 ಎಚ್.ಪಿ ಪಂಪ್‌ಸೆಟ್‌ಗೆ ಸ್ಮಾರ್ಟ್ ಮೀಟರ್ ಅಳವಡಿಸುವ ಯೋಜನೆಗೆ ಸರ್ಕಾರ ಕೈ ಹಾಕಿದೆ.‌ ಇದರ ಅರಿವು ನಮ್ಮ ರೈತರಲ್ಲಿಲ್ಲ. ಸರ್ಕಾರದಿಂದ ಚಿಪ್ ಅಳವಡಿಸಿ ಕರೆನ್ಸಿ ರೂಪದಲ್ಲಿ ರೈತರಿಂದ ಹಣ ಪಡೆಯುವ ಹುನ್ನಾರ ನಡೆಸಿದೆ. ಕೂಡಲೇ ಈ ಯೋಜನೆ ಕೈಬಿಟ್ಟು ರೈತರ ಹಿತ ಕಾಯಬೇಕು’ ಎಂದು ಒತ್ತಾಯಿಸಿದರು.

‘ರೈತರು ಯಾವುದೇ ದರೋಡೆ ಮಾಡುತ್ತಿಲ್ಲ.‌ ಬದಲಾಗಿ ನಮಗೆ ಅನ್ನ ನೀಡುತ್ತಿದ್ದಾರೆ. ರೈತಪರ ಹೋರಾಟಕ್ಕಿಳಿದು ಪಾದಯಾತ್ರೆ ಮಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗ ರೈತಪರ ಕಾಳಜಿ ಮರೆತಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರೈತ ಸಂಘದ ಜೊತೆಗೂಡಿ ಹೋರಾಟ ಮಾಡಿದವರು.‌ ಇದೀಗ ಏನು ಮಾಡುತ್ತಿದ್ದೀರಿ. ‘ರೈತರ ಜೊತೆಯಲ್ಲಿ ನಾವಿದ್ದೇವೆ’ ಎಂದು ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ಭರವಸೆಯನ್ನು ಕೈಬಿಟ್ಟು ಬಗರ್‌ಹುಕುಂ ಹಾಗೂ ಅರಣ್ಯ ಸಾಗುವಳಿ ಮಾಡಿದ ರೈತರನ್ನು ಒಕ್ಕಲೆಬ್ಬಿಸುವ ಕಾರ್ಯಕ್ಕೆ ಕೈ ಹಾಕಿರುವುದು ಖಂಡಿನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಗೌರವಾಧ್ಯಕ್ಷ ಮಂಜುನಾಥ್ ಗೌಡ, ರಾಜ್ಯ ಘಟಕದ ಉಪಾಧ್ಯಕ್ಷ ಉಮೇಶ್ ಪಾಟೀಲ್, ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಅರೇಕೊಪ್ಪ, ದಂತ ವೈದ್ಯ ಎಚ್.ಇ‌. ಜ್ಞಾನೇಶ್ ಮಾತನಾಡಿದರು.

ಹುಚ್ಚಪ್ಪ ತಳೇಬೈಲ್, ಪಂಚಾಕ್ಷರಿ ಜಿರಲೆಕೊಪ್ಪ, ಬಸವರಾಜಪ್ಪ, ಮೇಘರಾಜಗೌಡ, ಬಸವರಾಜ್, ಯೋಗೀಶ್, ಪಕ್ಕೀರಸ್ವಾಮಿ, ಚಂದ್ರಗೌಡ, ಶಿವಕುಮಾರ್, ಕಿರಣ್, ಮಾಲತೇಶ್ ಕೊಡಕಣಿ ನರೇಂದ್ರ, ಸುಭಾಷ್, ಕಾರ್ತಿಕ್ ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.