ADVERTISEMENT

ಶಿವಮೊಗ್ಗ | ಜೋಳ ಬೆಳೆಯಿಂದ ರೈತರು ವಿಮುಖ: ಅಡಿಕೆ, ಶುಂಠಿ ಬೆಳೆಗೆ ಒತ್ತು

ವರ್ಷದಿಂದ ವರ್ಷಕ್ಕೆ ಮೆಕ್ಕೆಜೋಳ ಬಿತ್ತನೆ ಪ್ರದೇಶ ಕುಸಿತ

ನಾಗರಾಜ ಹುಲಿಮನೆ
Published 10 ಜೂನ್ 2025, 6:29 IST
Last Updated 10 ಜೂನ್ 2025, 6:29 IST
ಶಿವಮೊಗ್ಗದ ಹೊರ ವಲಯದಲ್ಲಿ ರೈತರು ಮೆಕ್ಕೆಜೋಳ ಬಿತ್ತನೆಯಲ್ಲಿ ತೊಡಗಿರುವುದು
ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್‌
ಶಿವಮೊಗ್ಗದ ಹೊರ ವಲಯದಲ್ಲಿ ರೈತರು ಮೆಕ್ಕೆಜೋಳ ಬಿತ್ತನೆಯಲ್ಲಿ ತೊಡಗಿರುವುದು ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್‌   

ಶಿವಮೊಗ್ಗ: ಮಲೆನಾಡಿನಲ್ಲಿ ಮೆಕ್ಕೆಜೋಳ ಬೆಳೆಯಲು ರೈತರು ಒಲವು ತೋರುತ್ತಿಲ್ಲ. ಇದರಿಂದ ಮೆಕ್ಕೆಜೋಳ ಬೆಳೆಯುವ ಪ್ರದೇಶದ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. 

ಜಿಲ್ಲೆಯಲ್ಲಿ ಅಡಿಕೆ ಹಾಗೂ ಶುಂಠಿಗೆ ಪೂರಕ ವಾತಾವರಣ ಇರುವುದರಿಂದ ತೋಟಗಾರಿಕೆ ಬೆಳೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಭತ್ತ, ಮೆಕ್ಕೆಜೋಳಕ್ಕೆ ಸರಿಯಾಗಿ ಬೆಲೆ ಸಿಗದೇ ಇರುವುದರಿಂದ ಹತಾಶರಾಗಿರುವ ಬಹುಪಾಲು ರೈತರು ಇವುಗಳೆಡಗಿನ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಪ್ರತಿ ವರ್ಷ 10ಕ್ಕೂ ಹೆಚ್ಚು ಎಕರೆ (4 ಹೆಕ್ಟೇರ್) ಮೆಕ್ಕೆಜೋಳ ಬೆಳೆಯುವ ಪ್ರದೇಶ ತೋಟಗಾರಿಕೆ ಹಾಗೂ ಇನ್ನಿತರ ಬೆಳೆಗಳ ಪ್ರದೇಶವಾಗಿ ಮಾರ್ಪಾಡಾಗುತ್ತಿದೆ. 

‘ಜಿಲ್ಲೆಯಲ್ಲಿ 2024–25ರ ಮುಂಗಾರಿನಲ್ಲಿ 1.23 ಲಕ್ಷ ಹೆಕ್ಟೇರ್ ಪ್ರದೇಶದ ಪೈಕಿ 47,000 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ 44,000 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಗುರಿ ಸಾಧನೆಯಾಗಿದೆ. 2025–26ರ ಮುಂಗಾರಿನಲ್ಲಿ 1.25 ಲಕ್ಷ ಹೆಕ್ಟೇರ್ ಪ್ರದೇಶದ ಪೈಕಿ 46,000 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯ ಗುರಿ ಹೊಂದಲಾಗಿದೆ. ಇದು 40,000 ಹೆಕ್ಟೇರ್‌ಗೆ ಕುಸಿಯುವ ಸಾಧ್ಯತೆ ಇದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕಿರಣ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.  

ADVERTISEMENT

‘ಬಿತ್ತನೆ ಕಾರ್ಯ ನಡೆಸಲು ಪೂರಕ ವಾತಾವರಣ ಇದ್ದು, ಮುಂಗಾರಿನ ನಿರೀಕ್ಷೆಯಲ್ಲಿ ರೈತರಿದ್ದಾರೆ. ಇಲಾಖೆಯಿಂದ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೆಕ್ಕೆಜೋಳ ಬೆಳೆಯಲು ರೈತರು ಆಸಕ್ತಿ ತೋರಬೇಕು’ ಎಂದು ಸಲಹೆ ನೀಡಿದರು. 

ಇಲ್ಲಿನ ಶಿವಪ್ಪನಾಯಕ ಕೃಷಿ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸರ್ಕಾರ ‘ಮೆಕ್ಕೆಜೋಳ ಪ್ರಾದೇಶಿಕ ಸಂಶೋಧನಾ ಕೇಂದ್ರ’ ಆರಂಭಿಸಲು ಮುಂದಾಗಿದೆ. ಈ ನಡುವೆ ಮಲೆನಾಡಿನಲ್ಲಿ ಮೆಕ್ಕೆಜೋಳ ಬೆಳೆಯಲು ರೈತರು ನಿರಾಸಕ್ತಿ ತೋರುತ್ತಿದ್ದಾರೆ.  ತೋಟಗಾರಿಗೆ ಬೆಳೆಗಳೆಡಗಿನ ಒಲವು ಮೆಕ್ಕೆಜೋಳ ಬೆಳೆಗೆ ಕಂಟಕವಾಗಿ ಪರಿಣಮಿಸುತ್ತಿದೆ. 

‘ಮಲೆನಾಡು ವಾತಾವರಣ ಮೆಕ್ಕೆಜೋಳ ಬೆಳೆಗೆ ಪೂರಕವಾಗಿದೆ. ಆದರೆ, ಕಳೆದ ಐದು ವರ್ಷಕ್ಕೆ ಹೋಲಿಸಿದರೆ ಇಳುವರಿಯಲ್ಲಿ ಕುಸಿತ ಉಂಟಾಗಿದೆ. ಜತೆಗೆ ರೋಗವೂ ಕಾಡುತ್ತಿದ್ದು, ವಾರಕ್ಕೆ 3 ಬಾರಿ ಔಷಧಿ ಸಿಂಪಡಣೆ ಮಾಡಬೇಕು. ಇದು ಕೂಡ ರೈತರಿಗೆ ಹೊರೆಯಾಗಿ ಪರಿಣಮಿಸುತ್ತಿದೆ. ಇದೆಲ್ಲದರ ನಡುವೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ. ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ, ಜೋಳ ಬಿತ್ತನೆಯ ಆಸಕ್ತಿ ಕಡಿಮೆ ಆಗಿದೆ’ ಎಂದು ಸ್ಥಳೀಯ ರೈತ ವಿರೂಪಾಕ್ಷ ತಿಳಿಸಿದರು.

‘ಎಂಎಸ್‌ಪಿ: ಮೆಕ್ಕೆಜೋಳ ಖರೀದಿಸಲಿ’ 

‘ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ಮೆಕ್ಕೆಜೋಳ ಖರೀದಿ ನಿಲ್ಲಿಸಿದೆ. ಇದರಿಂದ ರೈತರು ಮೆಕ್ಕೆಜೋಳ ಬೆಳೆಯುವ ಆಸಕ್ತಿ ಕಳೆದುಕೊಂಡಿದ್ದಾರೆ. ಈ ಹಿಂದೆ ಎಂಎಸ್‌ಪಿಯಡಿ ಅತಿ ಹೆಚ್ಚಾಗಿ ಶಿವಮೊಗ್ಗ ಭಾಗದಲ್ಲಿ ಮೆಕ್ಕೆಜೋಳ ಖರೀದಿ ನಡೆಯುತ್ತಿತ್ತು. ಆದರೆ, ಈಗ ಶುಂಠಿ ಖರೀದಿ ಮಾತ್ರ ನಡೆಯುತ್ತಿದೆ. ಇದರಿಂದ, ಸೂಕ್ತ ಬೆಂಬಲ ಬೆಲೆ ರೈತರಿಗೆ ಸಿಗುತ್ತಿಲ್ಲ. ರೈತರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಲಾಭದ ಉದ್ದೇಶ ಹೊಂದಿರುವ ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಸರ್ಕಾರ ಪುನಃ ಎಂಎಸ್‌ಪಿ ಯೋಜನೆಯಡಿ ಜೋಳ ಖರೀದಿಗೆ ಮುಂದಾಗಬೇಕು’ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಒತ್ತಾಯಿಸಿದರು. 

‘ಅಡಿಕೆಗೆ ಪೂರಕ ವಾತಾವರಣ’

‘ಮಲೆನಾಡಿನಲ್ಲಿ ಭತ್ತ ಹಾಗೂ ಜೋಳ ಬೆಳೆಯುವ ಪ್ರದೇಶದಲ್ಲಿ ಈಗ ಅಡಿಕೆ ಬೆಳೆಯಲಾಗುತ್ತಿದೆ. ಅಡಿಕೆಯಿಂದ ಉತ್ತಮ ಲಾಭ ಪಡೆಯಬಹುದು ಎಂಬುದು ರೈತರ ಉದ್ದೇಶ. ಇಲ್ಲಿ ನೀರಿಗೂ ಕೊರತೆ ಇಲ್ಲ. ಅಡಿಕೆಯ ನಡುವೆ ಲಾಭದಾಯಕವಾದ ಕಾಳು ಮೆಣಸು, ಲವಂಗವನ್ನು ಅಂತರ ಬೆಳೆಯಾಗಿ ಬೆಳೆಯಲಾಗುತ್ತಿದೆ. ಇದರಿಂದ, ಮೆಕ್ಕೆಜೋಳ ಹಾಗೂ ಭತ್ತಕ್ಕೆ ಹೆಚ್ಚು ಉತ್ತೇಜನ ಸಿಗುತ್ತಿಲ್ಲ. ರೈತರು ಅಡಿಕೆ ಬೆಳೆಗೆ ಅಂಟಿಕೊಳ್ಳುವುದು ತಪ್ಪು’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಜಿ.ಸುಜಾತ ತಿಳಿಸಿದರು.

ತೋಟಗಾರಿಕೆ ಬೆಳೆಗಳಿಗೆ ಮಾತ್ರ ಸೀಮಿತವಾಗದೇ ಆಹಾರ ಧಾನ್ಯದ ಬೆಳೆಗಳ ಬಗ್ಗೆಯೂ ರೈತರು ಒಲವು ತೋರಬೇಕು.
– ಕಿರಣ್ ಕುಮಾರ್ ಜಂಟಿ ನಿರ್ದೇಶಕ ಕೃಷಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.