ಶಿಕಾರಿಪುರ: ತಾಲ್ಲೂಕಿನ ಅಂಬ್ಲಿಗೊಳ್ಳ ಜಲಾಶಯ ಕೋಡಿ ತುಂಬಿ ಭೋರ್ಗರೆಯುತ್ತಿದೆ. ಧುಮ್ಮಿಕ್ಕುವ ನೀರಿನಲ್ಲಿ ತೇಲಿ ಬರುವ ಮೀನುಗಳನ್ನು ಸ್ಥಳೀಯ ಯುವಕರು ಶಿಕಾರಿ ಮಾಡುವುದು ನೋಡುಗರನ್ನು ಆಕರ್ಷಿಸುತ್ತಿದೆ.
ಜಲಾಶಯ ತುಂಬಿದ ನಂತರ ಹೆಚ್ಚುವರಿ ನೀರು ಹರಿದು ಕುಮದ್ವತಿ ನದಿಗೆ ಸೇರುತ್ತದೆ. ಕೋಡಿ ಮೇಲೆ ರಭಸವಾಗಿ ಹರಿಯುವ ನೀರಿನಲ್ಲಿ ನಿಲ್ಲುವುದೇ ಸಾಹಸ. ಆ ನೀರಿನಲ್ಲಿ ಹರಿದು ಬರುವ ಮೀನು ಹಿಡಿಯುವ ದೃಶ್ಯ ನೋಡುಗರ ಮೈನವಿರೇಳಿಸುತ್ತದೆ.
ಇಲ್ಲಿ ಕಾಟ್ಲ, ಗೌರಿ ತಳಿಯ ಮೀನು ಹೆಚ್ಚು ದೊರೆಯುತ್ತವೆ. 1 ಕೆ.ಜಿ.ಯಿಂದ 5 ಕೆ.ಜಿ.ವರೆಗೆ ತೂಗುವ ಮೀನು ಸಿಗುತ್ತವೆ. ಅಂಬ್ಲಿಗೊಳ್ಳ, ಡ್ಯಾಂ ಹೊಸೂರು, ಬನ್ನೂರು, ಅಣ್ಣಪ್ಪನಕಟ್ಟೆ, ಬೈರಾಪುರ ಸೇರಿ ಸುತ್ತಲಿನ ಗ್ರಾಮದ ಸಾಹಸಿ ಯುವಕರು ಮೀನು ಶಿಕಾರಿಯಲ್ಲಿ ನಿರತರಾಗುತ್ತಾರೆ.
ರಾಜ್ಯದಲ್ಲಿಯೇ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಎರಡನೇ ತಾಲ್ಲೂಕು ಶಿಕಾರಿಪುರ. ಪ್ರತಿ ಮಳೆಗಾಲದಲ್ಲೂ ಕೆರೆಗಳು ಕೋಡಿ ಬಿದ್ದು ನೀರು ಹರಿಯುವ ಜಾಗದಲ್ಲಿ ಮೀನು ಹಿಡಿಯುವುದು ಸಾಮಾನ್ಯ. ಕೆರೆ, ಜಲಾಶಯ ತುಂಬುವುದನ್ನೇ ಸ್ಥಳೀಯರು ಕಾಯುತ್ತಾರೆ. ಮಳೆ ಜೋರಾದರೆ ಸಾಕು ಬಲೆ, ಗಾಳ, ಬುಟ್ಟಿ ಸಿದ್ಧವಾಗಿಟ್ಟುಕೊಳ್ಳುತ್ತಾರೆ. ರಾತ್ರಿ ವೇಳೆಯಲ್ಲಿ ಕೋಡಿ ಬೀಳಬಹುದು ಎನ್ನುವಂತಿದ್ದರೆ ಕೋಡಿ ನೀರು ಹರಿಯುವ ಜಾಗದಲ್ಲಿ ಸಂಜೆಯೇ ಬಲೆ ಕಟ್ಟುತ್ತಾರೆ. ಕೋಡಿ ಬಿದ್ದ ತಕ್ಷಣ ದೊಡ್ಡ ಪ್ರಮಾಣದಲ್ಲಿ ಮೀನು ಹೊರ ಹೋಗುತ್ತವೆ ಎಂಬ ಕಾರಣಕ್ಕೆ ರಾತ್ರಿಯಿಡೀ ಅಲ್ಲಿಯೇ ಕಾದು ಕುಳಿತು ಶಿಕಾರಿ ಮಾಡುತ್ತಾರೆ.
ಮಳೆ ರಭಸಗೊಳ್ಳುತ್ತಿದ್ದಂತೆಯೇ ಜಲಾಶಯ, ಹಳ್ಳ, ಕೆರೆಗಳು ತುಂಬಿ ಹರಿಯುತ್ತವೆ. ಹರಿಯುವ ನೀರಿನ ರಭಸಕ್ಕೆ ಮೀನುಗಳು ಕಡಿಮೆ ನೀರಿನಾಶ್ರಯ ಇರುವ ಗದ್ದೆ, ಸಣ್ಣ ನೀರುಗುಂಡಿಗಳಿರುವ ಪ್ರದೇಶ, ನಾಲೆ, ತೋಡು ಪ್ರದೇಶಕ್ಕೆ ಹಿಂಡು ಹಿಂಡಾಗಿ ಬರುತ್ತವೆ. ಮೊಟ್ಟೆ ಇಟ್ಟು ಸಂತಾನಾಭಿವೃದ್ಧಿ ಮಾಡಲು ವಲಸೆ ಬರುತ್ತವೆ. ಅಲ್ಲದೇ ಹರಿಯುವ ನೀರಿನ ವಿರುದ್ಧ ಈಜುವುದು ಮೀನುಗಳಿಗೂ ಖುಷಿಕೊಡುವ ಸಂಗತಿ.
ರುಚಿಕರ ಖಾದ್ಯ
ಮಳೆಗಾಲದಲ್ಲಿ ಕೆರೆ ನಾಲೆ ಜಲಾಶಯ ತುಂಬಿದ ನಂತರ ನೀರಿನೊಂದಿಗೆ ಇಳಿದು ಬರುವ ಮೀನುಗಳು ತಾಜಾತನದಿಂದ ಕೂಡಿರುತ್ತವೆ. ಅವುಗಳಲ್ಲಿ ಪ್ರೋಟಿನ್ ಅಂಶ ಹೆಚ್ಚಿರುತ್ತದೆ. ಔಷಧೀಯ ಸತ್ವ ಅಧಿಕ ಪ್ರಮಾಣದಲ್ಲಿ ಇರುತ್ತದೆ ಎನ್ನುವ ನಂಬಿಕೆಯೂ ಗ್ರಾಮೀಣರಲ್ಲಿದೆ. ಹೀಗಾಗಿ ಮಳೆಗಾಲದ ಮೀನು ಶಿಕಾರಿ ಹೆಚ್ಚು ಜನಪ್ರಿಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.