ತ್ಯಾಗರ್ತಿ: ಸಮೀಪದ ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀಚಡಿ ಗ್ರಾಮದ ಶರ್ವಾಣಿ ಅನಂತಮೂರ್ತಿ ದಂಪತಿ ಮಳೆಗಾಲ ಬಂತೆಂದರೆ ಸಾಕು ವಿವಿಧ ಹೂವಿನ ಸಸಿ ನೆಡುವುದರಲ್ಲಿ ತಲ್ಲೀನರಾಗುತ್ತಾರೆ.
ಪ್ರತಿ ವರ್ಷ ಜೂನ್ ತಿಂಗಳಲ್ಲಿ ವಿವಿಧ ಬಗೆಯ ಹೂವಿನ ಸಸಿಗಳನ್ನು ಹುಡುಕಿ ತಂದು ಮನೆಯ ಅಂಗಳದಲ್ಲಿ ನೆಡುವುದೇ ಅವರ ಕಾಯಕ. ಅದರಲ್ಲೂ ಡಾಲಿಯಾ (ಡೇರೆ) ಹೂವಿನ ಸಸಿ ನೆಡುವುದರಲ್ಲಿ ಹೆಚ್ಚು ಆಸಕ್ತಿ. ಲಿಲ್ಲಿಪುಟ್, ಬೆಂಕಿಕಡ್ಡಿ ತಾವರೆ, ಖುತ್ರಿ, ಉಂಡೆತಾವರೆ, ನೀಲಿತಾವರೆ, ಬಿಳಿಕಡ್ಡಿ, ಕೆಂಪುಕಡ್ಡಿ, ಕಂದು ತಾವರೆ, ಪೂನಾ ತಾವರೆ ಹೀಗೆ ಸುಮಾರು 150ಕ್ಕೂ ಹೆಚ್ಚು ಬಗೆಯ ಸಸಿಗಳನ್ನು ಸಂಗ್ರಹಿಸಿ ಹೂವಿನ ಕೃಷಿಯಲ್ಲಿ ಸಂತೋಷ ಕಾಣುತ್ತಿದ್ದಾರೆ.
ಜೂನ್ನಲ್ಲಿ ಪ್ಲಾಸ್ಟಿಕ್ ಚೀಲಗಳಿಗೆ ಮಣ್ಣು, ಗೊಬ್ಬರಗಳ ಮಿಶ್ರಣ ತುಂಬಿ ಡೇರೆ ಗೆಡ್ಡೆಗಳನ್ನು ನೆಟ್ಟು ಮಳೆಯಲ್ಲಿಡುತ್ತಾರೆ. ಅದು ಮೊಳಕೆ ಬಂದು ಗಿಡವಾದ ನಂತರ ಗಿಡಗಳು ಬೀಳದಂತೆ ಆಶ್ರಯಕ್ಕಾಗಿ ಕೋಲುಗಳನ್ನು ಕೊಟ್ಟು ಪೋಷಣೆ ಮಾಡುತ್ತಾರೆ. ಒಂದು ತಿಂಗಳ ನಂತರ ಗಿಡಗಳು ಹೂ ಬಿಡಲು ಪ್ರಾರಂಭಿಸಿ ಮನೆಯ ಅಂಗಳವೆಲ್ಲ ಹೂಗಳಿಂದ ರಾರಾಜಿಸುತ್ತದೆ. ಈ ಗಿಡಗಳು ಈಗ ಹೂವಾಗಿ ನಿಂತಿದ್ದು, ಮನೆಯ ಅಂಗಳ ನಂದನವನವಾಗಿ ಕಂಗೊಳಿಸಿ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.
ಹೂವಿನ ಗಿಡವೊಂದೇ ಅಲ್ಲದೇ ಮನೆಗೆ ಬೇಕಾಗುವಷ್ಟು ತರಕಾರಿ, ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಸಾವಯವ ಗೊಬ್ಬರ ಉಪಯೋಗಿಸಿ ಬೆಳೆಯುತ್ತಿದ್ದಾರೆ.
ಬಣ್ಣ ಬಣ್ಣದ ಹೂಗಳು ಮನಸಿಗೆ ಮುದ ನೀಡುತ್ತವೆ. ಹೀಗಾಗಿ ಹೂ ಬೆಳೆಯುವುದನ್ನು ಹವ್ಯಾಸವಾಗಿಸಿಕೊಂಡಿದ್ದೇವೆ. ಹೂಗಳು ಮಾಗಿದ ನಂತರ ಗಿಡದ ಗೆಡ್ಡೆಗಳನ್ನು 7–8 ತಿಂಗಳಕಾಲ ಸಂರಕ್ಷಿಸಿ ಶೇಖರಿಸಿಟ್ಟುಕೊಳ್ಳುವುದೇ ದೊಡ್ಡ ಸವಾಲಾಗಿದೆ.
– ಶರ್ವಾಣಿ ಅನಂತಮೂರ್ತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.