ADVERTISEMENT

44 ಕೂಲಿಕಾರರಿಗೆ ಊಟ, ವಸತಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 17:23 IST
Last Updated 30 ಮಾರ್ಚ್ 2020, 17:23 IST
ಸಾಗರ ತಾಲ್ಲೂಕಿನ ನಾಡಕಲಸಿ ಗ್ರಾ.ಪಂ ವ್ಯಾಪ್ತಿಯ ಎಲವರಸಿಯಲ್ಲಿ ರಸ್ತೆ ಕೆಲಸಕ್ಕೆ ಬಂದಿದ್ದ ಬಿಹಾರ ಮೂಲದ ಕೂಲಿಕಾರ್ಮಿಕರನ್ನು ನಾಡಕಲಸಿ ಗ್ರಾಮ ಪಂಚಾಯಿತಿ ಪಿಡಿಒ, ಅಧ್ಯಕ್ಷರು ಸದಸ್ಯರು ಭೇಟಿಯಾಗಿ ಅವರ ವಸತಿ ಸೌಲಭ್ಯಗಳ ಬಗ್ಗೆ ಸೂಚನೆ ನೀಡಿದರು.
ಸಾಗರ ತಾಲ್ಲೂಕಿನ ನಾಡಕಲಸಿ ಗ್ರಾ.ಪಂ ವ್ಯಾಪ್ತಿಯ ಎಲವರಸಿಯಲ್ಲಿ ರಸ್ತೆ ಕೆಲಸಕ್ಕೆ ಬಂದಿದ್ದ ಬಿಹಾರ ಮೂಲದ ಕೂಲಿಕಾರ್ಮಿಕರನ್ನು ನಾಡಕಲಸಿ ಗ್ರಾಮ ಪಂಚಾಯಿತಿ ಪಿಡಿಒ, ಅಧ್ಯಕ್ಷರು ಸದಸ್ಯರು ಭೇಟಿಯಾಗಿ ಅವರ ವಸತಿ ಸೌಲಭ್ಯಗಳ ಬಗ್ಗೆ ಸೂಚನೆ ನೀಡಿದರು.   

ತ್ಯಾಗರ್ತಿ: ಸಾಗರ ತಾಲ್ಲೂಕಿನ ತ್ಯಾಗರ್ತಿ–ಸಾಗರ ರಸ್ತೆ ಕಾಮಗಾರಿ ನಿರ್ವಹಿಸಲು ಬಂದಿದ್ದ 44 ಕೂಲಿಕಾರರಿಗೆ ಊಟ ವಸತಿಗೆ ಬೇಕಾದ ವ್ಯವಸ್ಥೆಗಳನ್ನು ಮಾಡಲಾಗಿದೆ.

ಬಿಹಾರ ರಾಜ್ಯದ ಕೂಲಿಕಾರ್ಮಿಕರು ಲಾಕ್‍ಡೌನ್‌ನಿಂದಾಗಿ ಕೆಲಸವಿಲ್ಲದೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಇವರು ತಮ್ಮ ಪರಿಸ್ಥಿತಿ ಹಾಗೂ ಸಮಸ್ಯೆಗಳನ್ನು ಮೊಬೈಲ್‌ನಲ್ಲಿ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತೋಡಿಕೊಂಡಿದ್ದರು.

‘100ಕ್ಕೂ ಹೆಚ್ಚು ಜನ ಸಾಗರ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ರಸ್ತೆ ಮುಂತಾದ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲು ಕೂಲಿಕಾರರಾಗಿ ಬಂದಿದ್ದು ನಮಗೆ ನಮ್ಮ ಗ್ರಾಮಕ್ಕೆ ಹೋಗಲು ಅವಕಾಶ ಮಾಡಿಕೊಡಬೇಕು’ ಎಂದು ಕರ್ನಾಟಕ ಹಾಗೂ ಬಿಹಾರ ಸರ್ಕಾರಕ್ಕೆ ಮನವಿ ಮಾಡಿದ್ದರು. ನಮಗೆ ಇಲ್ಲಿ ಕುಡಿಯಲು, ತಿನ್ನಲು ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ, ಸೂಕ್ತ ಸೌಲಭ್ಯ ಕಲ್ಪಿಸದಿದ್ದರೆ ಕೊರೊನಾ ಬರುವ ಮೊದಲೇ ನಾವು ಸಾಯುತ್ತೇವೆ ಎಂದು ಅಳಲು ತೋಡಿಕೊಂಡಿದ್ದರು.

ADVERTISEMENT

ಅವರ ಪರಿಸ್ಥಿತಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿದಾಡಿಸ ಕೂಡಲೇ ಎಚ್ಚೆತ್ತ ಗ್ರಾಮಾಡಳಿತ ಪೊಲೀಸರ ಜೊತೆ ಅವರು ಉಳಿದುಕೊಂಡಿರುವ ಪ್ರದೇಶಕ್ಕೆ ಸೋಮವಾರ ಹೋಗಿ ‘ಈಗ ಯಾರೂ ಇಲ್ಲಿಂದ ತೆರಳಲು ಸಾಧ್ಯವಿಲ್ಲ ಇರುವ ಜಾಗದಲ್ಲಿ ಊಟ ವಸತಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಿಕೊಡಲಾಗುವು. ಸ್ವಚ್ಛತೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಇರಬೇಕು’ ಎಂದು ಸೂಚಿಸಿದೆ.

‘ನಾಡಕಲಸಿ ಗ್ರಾ.ಪಂ ವ್ಯಾಪ್ತಿಯ ತ್ಯಾಗರ್ತಿ ಸಾಗರ ರಸ್ತೆ ಕಾಮಗಾರಿಗೆ ಹೊರರಾಜ್ಯದಿಂದ ಬಂದಿರುವ 44 ಕೂಲಿಕಾರರಿಗೆ ಊಟ ವಸತಿಗೆ ಬೇಕಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಲವರಸಿ ಗ್ರಾಮದ ವಿಶಾಲವಾದ ಪ್ರದೇಶದಲ್ಲಿ ಶುಂಠಿ ಕಣ ಹಾಗೂ ಶೆಡ್‌ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಅವರಿಗೆ ಆಹಾರ ಸಾಮಗ್ರಿಗಳಿಗೆ ಕೊರತೆಯಾಗದಂತೆ ಗುತ್ತಿಗೆದಾರರು ಹಾಗೂ ಕಾರ್ಮಿಕ ಇಲಾಖೆಯವರು ಪಡಿತರ ವ್ಯವಸ್ಥೆ ಮಾಡಿದ್ದಾರೆ. ಅವರು ಚಿಕನ್, ಮಟನ್ ಹಾಗೂ ಮದ್ಯ ಪೂರೈಸಲು ಕೋರುತ್ತಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಮದ್ಯ ಮಾರಾಟ, ಚಿಕನ್, ಮಟನ್ ಮಾರಾಟ ನಿಷೇಧಿಸಲಾಗಿದ್ದು ಇರುವ ವ್ಯವಸ್ಥೆಯಲ್ಲಿ ಕೆಲವು ದಿನ ಹೊಂದಿಕೊಂಡು ಇರಬೇಕೆಂದು ತಿಳಿಸಲಾಗಿದೆ’ ಎಂದು ನಾಡಕಲಸಿ ಗ್ರಾ.ಪಂ ಪಿಡಿಒ ಶರಾವತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.