ADVERTISEMENT

ಚತುಷ್ಪತ ರಸ್ತೆ | ಅವೈಜ್ಞಾನಿಕ ಕಾಮಗಾರಿ: 50ಕ್ಕೂ ಹೆಚ್ಚು ಗುಡ್ಡ ನೆಲಸಮ

ನಿರಂಜನ ವಿ.
Published 18 ಜುಲೈ 2024, 6:55 IST
Last Updated 18 ಜುಲೈ 2024, 6:55 IST
ತೀರ್ಥಹಳ್ಳಿ ತಾಲ್ಲೂಕಿನ ಭಾರತೀಪುರದಲ್ಲಿ ಬೃಹತ್‌ ಪ್ರಮಾಣದಲ್ಲಿ ಗುಡ್ಡದ ಮಣ್ಣು ಜರುಗಲು ಆರಂಭವಾಗಿರುವುದು.
ತೀರ್ಥಹಳ್ಳಿ ತಾಲ್ಲೂಕಿನ ಭಾರತೀಪುರದಲ್ಲಿ ಬೃಹತ್‌ ಪ್ರಮಾಣದಲ್ಲಿ ಗುಡ್ಡದ ಮಣ್ಣು ಜರುಗಲು ಆರಂಭವಾಗಿರುವುದು.   

ತೀರ್ಥಹಳ್ಳಿ: ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಕೈಗೆತ್ತಿಕೊಂಡಿರುವ ಕಾಮಗಾರಿ ಮಲೆನಾಡಿನ ನವಿರುತನಕ್ಕೆ ಮಾದರಿ ಆಗಿದ್ದ ತೀರ್ಥಹಳ್ಳಿ ತಾಲ್ಲೂಕನ್ನು ಹಿಂಡಿ–ಹಿಪ್ಪೆ ಮಾಡುತ್ತಿದೆ. ಇಲ್ಲಿನ ಕಾಡು–ಗುಡ್ಡಗಳು ಅಪ್ಪಚ್ಚಿ ಆಗುತ್ತಿವೆ. ಅರಣ್ಯ, ಕಂದಾಯ ವರ್ಗೀಕೃತ ಪ್ರದೇಶದಲ್ಲಿನ ಸಾವಿರಾರು ಮರಗಳು ಧರೆಗುರುಳುತ್ತಿವೆ.

ತೀರ್ಥಹಳ್ಳಿಯ ಹೆಬ್ಬಾಗಿಲು ಭಾರತೀಪುರದಲ್ಲಿ ₹56 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಮೇಲ್ಸೇತುವೆ (ಪ್ಲೈ ಓವರ್)‌ ಸುತ್ತಮುತ್ತಲಿನ 300 ಮೀಟರ್‌ ವ್ಯಾಪ್ತಿಯಲ್ಲಿ ಮಂಗಳವಾರ ಭಾರೀ ಮಳೆಗೆ ಗುಡ್ಡ ಕುಸಿತ ಆಗಿದೆ. ಅಲ್ಲದೇ ಗುಡ್ಡದಲ್ಲಿದ್ದ ಅಪರೂಪದ ಮರ, ಗಿಡಗಳು ಧರೆಗುರುಳಿವೆ.

₹537.47 ಕೋಟಿ ವೆಚ್ಚದಲ್ಲಿ ಶಿವಮೊಗ್ಗ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169 ಮಾರ್ಗದ ವಿಸ್ತರಣೆ ಕಾಮಗಾರಿ ಪ್ರಕ್ರಿಯೆ ಆರಂಭಗೊಂಡಿದೆ. ಇದರಲ್ಲಿ ರಾಷ್ಟ್ರೀಯ ಹೆದ್ದಾರಿ 169 ‘ಎ’ ಮಾರ್ಗದ ಮೇಗರವಳ್ಳಿಯಿಂದ ಆಗುಂಬೆವರೆಗೆ ರಸ್ತೆ ವಿಸ್ತರಣೆ ಕಾಮಗಾರಿಗೆ ₹ 96.2 ಕೋಟಿ, ಕೋಣಂದೂರು ಚತುಷ್ಪತ ರಸ್ತೆ ₹25 ಕೋಟಿ, ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ ₹8 ಕೋಟಿ ಮಂಜೂರಾಗಿದೆ.

ADVERTISEMENT

ಮೇಳಿಗೆ ರಸ್ತೆಯ ಹೆಡಗೆದಿಬ್ಬ, ಕುಪ್ಪಳಿ-ಹಿರೇಕೇರೂರು, ಕೆಸರೆ-ಚಿಟ್ಟೇಬೈಲು ಬೈಪಾಸ್ ರಸ್ತೆ ಅಭಿವೃದ್ಧಿ‌ ಪ್ರಕ್ರಿಯೆ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಕಾಮಗಾರಿಗೆ ಮಣ್ಣು ಸಂಗ್ರಹಣೆ, ಸಾರಿಗೆ ವ್ಯವಸ್ಥೆಗೆ ಅನುಕೂಲವಾಗುವಂತೆ ಗುಡ್ಡ ಕಡಿಯುವ ಪ್ರಕ್ರಿಯೆ ಅಲ್ಲಲ್ಲಿ ಆರಂಭಗೊಂಡಿದೆ. ವಿವಿಧ ರಸ್ತೆ ವಿಸ್ತರಣೆ ಕಾಮಗಾರಿಗೆ ಅಂದಾಜು 50ಕ್ಕೂ ಹೆಚ್ಚು ಗುಡ್ಡಗಳು ಧರೆಗುರುಗಳಿವೆ. 

ಕೃಷಿ ಜಮೀನು, ಮನೆ, ಗ್ರಾಮಠಾಣ, ನೆಡುತೋಪು, ಅರಣ್ಯ ಪ್ರದೇಶದಲ್ಲಿ ರಸ್ತೆಯನ್ನು ನೇರಗೊಳಿಸಿ ದೂರವನ್ನು ಕಡಿತಗೊಳಿಸುವ ಕಾಮಗಾರಿ ಎಗ್ಗಿಲ್ಲದೆ ಸಾಗಿದೆ.

ತೀರ್ಥಹಳ್ಳಿ ತಾಲ್ಲೂಕಿನ ಭಾರತೀಪುರದಲ್ಲಿ ಗುಡ್ಡ ಜರುಗುತ್ತಿರುವುದು.
ಭಾರತೀಪುರ ಫ್ಲೈ ಓವರ್‌ ಕಾಮಗಾರಿಗೆ ಕೇಂದ್ರ ಸರ್ಕಾರದ ಅರಣ್ಯ ಪೂರ್ವಾನುಮತಿ (ಎಫ್‌ಸಿ) ಪಡೆದುಕೊಳ್ಳಲಾಗಿದೆ. ಗುಡ್ಡ ಕುಸಿತದ ಸಂಬಂಧ ಪರಿಶೀಲನೆ ನಡೆಸಲಾಗುವುದು. ರಾಷ್ಟ್ರೀಯ ಹೆದ್ದಾರಿ 169 169 ‘ಎ’ ಮಾರ್ಗದಲ್ಲಿ ಸದ್ಯ ಕಂದಾಯ ಜಾಗದಲ್ಲಿ ಕಾಮಗಾರಿ ನಡೆಯುತ್ತಿದೆ
ಇಶಿವಶಂಕರ್‌ ಶಿವಮೊಗ್ಗ ಡಿಎಫ್‌ಒ
ಕಾಮಗಾರಿಗಳ ಹಿಂದೆ ಗುಡ್ಡದ ಮಣ್ಣು ತೆಗೆಯುವ ಮೋಸ ಅಡಗಿದೆ. ಗುತ್ತಿಗೆದಾರರು ಎಂಜಿನಿಯರ್ ದುರಾಲೋಚನೆ ದುರಂತಕ್ಕೆ ಕಾರಣವಾಗುತ್ತಿದೆ. ಮಳೆನಾಡಿನ ಭೌಗೋಳಿಕ ವೈಶಿಷ್ಟ್ಯತೆಗೆ ಅನುಗುಣವಾಗಿ ಯೋಜನೆ ರೂಪುಗೊಳ್ಳುತ್ತಿಲ್ಲ
ಕಂಬಳಿಗೆರೆ ರಾಜೇಂದ್ರ ರೈತ ಮುಖಂಡ
ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ತಂದಿರುವ ಅನುದಾನ ಅವೈಜ್ಞಾನಿಕ ಕಾಮಗಾರಿಗೆ ದುರ್ಬಳಕೆಯಾಗಿದೆ. ಲೆಕ್ಕವಿಲ್ಲದಷ್ಟು ಗುಡ್ಡಗಳು ನೆಲಸಮಗೊಳ್ಳುತ್ತಿದೆ. ಹೆದ್ದಾರಿಯಲ್ಲಿ ಆಗಿರುವ ಕಳಪೆ ಕಾಮಗಾರಿ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು
ಪಣಿರಾಜ್‌ ಕಟ್ಟೇಹಕ್ಕಲು ಶೇಡ್ಗಾರು ಗ್ರಾ.ಪಂ. ಸದಸ್ಯ
ಭೂ ಕುಸಿತ: ತೀರ್ಥಹಳ್ಳಿ ತಲ್ಲಣ 
ಕಳೆದ ಐದು ವರ್ಷಗಳಿಂದ ತೀರ್ಥಹಳ್ಳಿ ತಾಲ್ಲೂಕಿನಲ್ಲಿ 25ಕ್ಕೂ ಹೆಚ್ಚು ಕಡೆ ಗುಡ್ಡಗಳು ಕುಸಿದಿವೆ. 2019ರಲ್ಲಿ ಮಂಡಗದ್ದೆ ಸಮೀಪದ ಹೆಗಲತ್ತಿ 2021ರಲ್ಲಿ ಹೆಗ್ಗಾರು 2023ರಲ್ಲಿ ಆಗುಂಬೆ ಘಾಟಿಯ 17ನೇ ತಿರುವು ಸೇರಿದಂತೆ ಬೊಬ್ಬಿ ಬೋಳಾರು ನೆಲ್ಲಿಗುಡ್ಡ ಹುಲಿಗುಡ್ಡ ಆರಗ ಸಮೀಪದ ಬೋಳುಗುಡ್ಡ ಕವಲೇದುರ್ಗಾ ಅಲಸೆ ಹೆಬ್ಬಳ್ಳಿ ಶಂಕರ ಯಡೇಹಳ್ಳಿ ಸಮೀಪದ ಕೆರೆಗುಡ್ಡ ಎರಡು ವರ್ಷಗಳಿಂದೀಚೆ ಭಾರತೀಪುರ ತಿರುವಿನಲ್ಲಿ 17 ಕಡೆಗಳಲ್ಲಿ ಗುಡ್ಡ ಜರುಗಿದೆ. ರಸ್ತೆ ವಿಸ್ತರಣೆಗಾಗಿ ಜೆಸಿಬಿ ಯಂತ್ರದ ಬಳಕೆ ಹೆಚ್ಚುತ್ತಿದೆ. ಮರ ಧರೆ ಗುಡ್ಡವನ್ನು ಸಲೀಸಾಗಿ ನೆಲಸಮ ಮಾಡಲಾಗುತ್ತಿದೆ. ರಸ್ತೆ ಮಾಡುವಾಗ ಭಾರೀ ಪ್ರಮಾಣದಲ್ಲಿ ವೈಬ್ರೇಟರ್‌ ಬುಲ್ಡೋಜರ್‌ ಬಳಕೆ ಇಳಿಜಾರು ಮಾದರಿಯಲ್ಲಿ ಗುಡ್ಡದ ಮಣ್ಣು ತೆಗೆಯದ ಕಾರಣದಿಂದ ಸುತ್ತಮುತ್ತಲ ಸೂಕ್ಷ್ಮ ಪ್ರದೇಶ ನಡುಗುತ್ತಿವೆ. ಇದು ಅನಾಹುತಕ್ಕೆ ಪ್ರಮುಖ ಕಾರಣವಾಗಿದೆ.
ಭೂ ಕುಸಿತ: ವರದಿ ಕಡೆಗಣನೆ
ಭೂ ಬಳಕೆ ನಕ್ಷೆ ಇಲ್ಲದೆ ಹೆದ್ದಾರಿ ರೈಲುಮಾರ್ಗ ಬೃಹತ್‌ ನೀರಾವರಿ ಕಾಲುವೆಯಿಂದ ಭೂ ಕುಸಿತವಾಗುತ್ತಿದೆ. ಶಿವಮೊಗ್ಗ ಕೊಡಗು ದಕ್ಷಿಣ ಕನ್ನಡ ಬೆಳಗಾವಿ ಚಿಕ್ಕಮಗಳೂರು ಹಾಸನ ಉಡುಪಿ ಕಾರವಾರ ಜಿಲ್ಲೆಗಳು ಭೂಕುಸಿತ ಪ್ರದೇಶವೆಂದು 2021ರಲ್ಲಿ ಭೂಕುಸಿತ ಅಧ್ಯಯನ ಸಮಿತಿ ವರದಿ ಸಲ್ಲಿಸಿದೆ. ಆದರೆ ವರದಿ ಗಂಭೀರತೆಯನ್ನು ಸರ್ಕಾರ ಕಡೆಗಣಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.