ADVERTISEMENT

ಷೇರು ವ್ಯವಹಾರದ ಕಂಪನಿ ಹೆಸರಿನಲ್ಲಿ ಸಾರ್ವಜನಿಕರಿಗೆ ವಂಚನೆ : ಆರೋಪ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 14:12 IST
Last Updated 7 ಜನವರಿ 2019, 14:12 IST

ಸಾಗರ: ನಗರದ ಚಾಮರಾಜ ಪೇಟೆ ಬಡಾವಣೆಯಲ್ಲಿ ಐಸಿಡಿಎಸ್ ಸೆಕ್ಯುರಿಟೀಸ್ ಲಿ. ಎಂಬ ಷೇರು ವ್ಯವಹಾರದ ಕಂಪನಿ ಹೆಸರಿನಲ್ಲಿ ಬಿ.ವಿ. ದೀಪಕ್ ಎಂಬುವರು ಸಾರ್ವಜನಿಕರಿಗೆ ಲಕ್ಷಾಂತರ ರೂಪಾಯಿ ಮೊತ್ತದ ವಂಚನೆ ಮಾಡಿದ್ದಾರೆ ವಂಚನೆಗೆ ಒಳಗಾಗಿರುವವರಲ್ಲಿ ಉದ್ಯಮಿ ಎಂ.ಶ್ರೀಧರ ಮೂರ್ತಿ ಆರೊಪಿಸಿದ್ದಾರೆ.

ಷೇರು ವಹಿವಾಟಿನ ಜೊತೆಗೆ ಶ್ರೀ ಬಿಡಾರ್ ಇನ್ಪ್ರಾಸ್ಟ್ರಕ್ಚರ್ ಅಂಡ್ ರಿಯಾಲಿಟಿ ಎಂಬ ಸಂಸ್ಥೆ ಹೆಸರಿನಲ್ಲಿ ಹಣವನ್ನು ದ್ವಿಗುಣ ಮಾಡಿಕೊಡುವುದಾಗಿ ಹೇಳಿ ದೀಪಕ್ ಅವರು ಹಲವರಿಗೆ ಮೋಸ ಮಾಡಿದ್ದಾರೆ ಎಂದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಸಕಾಲದಲ್ಲಿ ಷೇರು ಹಣದ ಮೊತ್ತವನ್ನು ಮರು ಪಾವತಿ ಮಾಡದೆ ಇದ್ದಾಗ ಹಣ ಪಾವತಿಗೆ ಕಾಲಾವಕಾಶ ಕೇಳಿ ಮುಚ್ಚಳಿಕೆ ಬರೆದುಕೊಟ್ಟ ನಂತರವೂ ದೀಪಕ್ ಅವರು ಜನರಿಗೆ ನೀಡಬೇಕಾದ ಹಣವನ್ನು ಪಾವತಿಸಿಲ್ಲ. ಈ ಸಂಬಂಧ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.

ADVERTISEMENT

ಪುರಸಭೆ ಮಾಜಿ ಸದಸ್ಯ ವೆಂಕಟೇಶ್, ‘ಆಸ್ತಿಯೊಂದನ್ನು ಮಾರಾಟ ಮಾಡಿದ ಹಣ ನನ್ನ ಬಳಿ ಇದೆ ಎಂದು ತಿಳಿದ ದೀಪಕ್ ಅವರು ನನ್ನ ಸ್ನೇಹ ಬೆಳೆಸಿ ₹15 ಲಕ್ಷ ಹೂಡಿಕೆ ಮಾಡುವಂತೆ ಮನವೊಲಿಸಿ ನಂತರ ವಂಚಿಸಿದ್ದಾರೆ’ ಎಂದು ದೂರಿದರು.

ನಿವೃತ್ತ ಶಿಕ್ಷಕಿ ಡಿ.ಕೆ.ಸರೋಜ, ‘ಸಾಗರ ನಗರದಲ್ಲಿ ನಿವೇಶನ ಕೊಡಿಸುವುದಾಗಿ ದೀಪಕ್ ಅವರು ನನ್ನಿಂದ ₹8 ಲಕ್ಷ ಪಡೆದು ಮೂರು ವರ್ಷವಾಗಿದ್ದರೂ ನಿವೇಶನ ಕೊಡಿಸಿಲ್ಲ, ಹಣವನ್ನೂ ಮರು ಪಾವತಿ ಮಾಡುತ್ತಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದರು.

ದೀಪಕ್ ಅವರು ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ್ದು, ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕರು ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಗಣಪತಿ ಗಾಳಿಪುರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.