ಶಿವಮೊಗ್ಗ: ಮನುಷ್ಯ ಬೆಳೆಯುತ್ತ ವಿಶಾಲವಾಗಬೇಕು. ಎಲ್ಲರನ್ನು ಪ್ರೀತಿಯಿಂದ ಕಾಣಬೇಕು. ಮಾನವೀಯ ಗುಣ ಬೆಳೆಸಿಕೊಳ್ಳಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ನಗರದ ಬೆಕ್ಕಿನ ಕಲ್ಮಠದ ಗುರುವಬಸವ ಭವನದಲ್ಲಿ ಭಾವೈಕ್ಯ ಸಮ್ಮೇಳನ ಹಾಗೂ ಗುರುಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಭಾವೈಕ್ಯದ ಕೊರತೆ ಎಷ್ಟಿದೆ ಎಂದರೆ, ಶ್ರೇಷ್ಠ ಧರ್ಮ ತಮ್ಮದೇ ಎಂದು ಧರ್ಮದ ಹೆಸರಲ್ಲಿ ಹಿಂಸೆಯನ್ನು ಮಾಡಲಾಗುತ್ತಿದೆ. ಹಿಂಸಾತ್ಮಕ ಭಾವನೆಗಳನ್ನು ಎಲ್ಲರು ಬೆಳೆಸಿಕೊಳ್ಳಲು ಮುಂದಾಗುತ್ತಿದ್ದಾರೆ. ಆದರೆ ಅದು ತಪ್ಪು. ಆ ರೀತಿಯ ಚಿಂತನೆಗಳು ಅಳಿದು ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಎಲ್ಲರಲ್ಲೂ ಬರಬೇಕು’
ಎಂದರು.
‘ಬರೆಯಲು ಬಾರದ, ಹೆಬ್ಬೆಟ್ಟು ಒತ್ತುವವರೇ ಇಂದು ಸೌಜನ್ಯದಿಂದ ಇದ್ದಾರೆ. ನಿಜವಾದ ನಾಗರಿಕ ನಡವಳಿಕೆ ಪಾಲಿಸುತ್ತಿದ್ದಾರೆ. ಮಾನವೀಯತೆ ಮೌಲ್ಯ ಕಳೆದುಕೊಳ್ಳುತ್ತಿರುವುದು ವಿದ್ಯಾವಂತರಿಂದಲೇ’ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಜಿ ಫೌಂಡೇಶನ್ ಮುಖ್ಯಸ್ಥ ಡಾ. ಧನಂಜಯ ಸರ್ಜಿ ಮಾತನಾಡಿ, ‘ನಾವು ಈ ರೀತಿ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳುವುದರಲ್ಲಿ ವಿಫಲರಾಗುತ್ತಿದ್ದೇವೆ. ಮಠಗಳು, ಗುರುಗಳು ಹೇಳುವ ಮಾತುಗಳಲ್ಲಿ ಶಕ್ತಿಯ ಭಾವ ತುಂಬಿರುತ್ತದೆ. ಒಬ್ಬ ವ್ಯಕ್ತಿ ಸಾಧಕನಾಗಬೇಕಿದ್ದರೆ, ಗುರುವಿನ ಮಾರ್ಗದಲ್ಲಿ ನಡೆದರೆ ಮಾತ್ರ ಅದು ಸಾಧ್ಯ’ ಎಂದರು.
ಇತಿಹಾಸಕಾರ ಹಾಗೂ ನಾಣ್ಯ ಸಂಗ್ರಹಕಾರ ಎಚ್. ಖಂಡೋಬರಾವ್ ಅವರಿಗೆ ‘ಗುರುಬಸವಶ್ರೀ’ ಪ್ರಶಸ್ತಿ ನೀಡಿ ಇದೇ ವೇಳೆ
ಸನ್ಮಾನಿಸಲಾಯಿತು.
ಗೌರಮ್ಮ ಆರ್. ವೀರಣ್ಣ, ಹರೂನ್ ಎಲ್. ಪಿಂಜರ್, ಕೃಷ್ಣಪ್ಪ ಆನಂದ್ ಟಿ.ಎಸ್, ಭಾಸ್ಕರ್ ಜಿ. ಕಾಮತ್, ಕೋರಿ ವೀರಣ್ಣ ಅವರನ್ನು ಸನ್ಮಾನಿಸಲಾಯಿತು.
ಇಳಕಲ್ ಚಿತ್ತರಗಿ ಮಠದ ಗುರುಮಹಾಂತ ಸ್ವಾಮೀಜಿ, ಆನಂದಪುರ ಮುರುಘರಾಜೇಂದ್ರ ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಎಸ್. ರುದ್ರೆಗೌಡ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್, ಗುರು ಬಸವ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಕೆ.ಎಸ್ ತಾರಾನಾಥ್, ಕೋಶಾಧ್ಯಕ್ಷ ಎಚ್.ಸಿ ಯೋಗೇಶ್, ಎಸ್.ಪಿ ದಿನೇಶ್, ಬಸವೇಶ್ವರ ಸಮಾಜ ಅಧ್ಯಕ್ಷ ಎಸ್. ಎಸ್ ಜ್ಯೋತಿ ಪ್ರಕಾಶ್, ಸಾಹಿತಿ ಡಾ. ಲೋಕೇಶ್ ಅಗಸನಕಟ್ಟೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.