ಸಾಗರ: ಹಸೆ ಚಿತ್ತಾರ ಕಲೆ ಗ್ರಾಮೀಣ ಹೆಣ್ಣುಮಕ್ಕಳ ಕಲಾಭಿವ್ಯಕ್ತಿಯ ಮಾಧ್ಯಮದ ಒಂದು ಪ್ರಮುಖ ಪ್ರಕಾರ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಸಮೀಪದ ಸಿರಿವಂತೆ ಗ್ರಾಮದ ಚಿತ್ರಸಿರಿ ಸಭಾಂಗಣದಲ್ಲಿ ಕರ್ನಾಟಕ ಹಸೆ ಚಿತ್ತಾರ ಪರಿಷತ್, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಚಿತ್ರಸಿರಿ ಸಂಸ್ಥೆ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರವಿರಾಜ್ ಸಾಗರ್ ಮಂಡಗಳಲೆ ಅವರ ‘ಕರ್ನಾಟಕ ದೇಸಿ ಚಿತ್ರಕಲೆ ಹಸೆ ಚಿತ್ತಾರ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಜನಪದರ ಅನನ್ಯ ಸಂಸ್ಕೃತಿಯ ಪ್ರತಿಬಿಂಬವಾಗಿರುವ ಹಸೆ ಚಿತ್ತಾರ ಕಲೆ ಗ್ರಾಮೀಣ ಪ್ರದೇಶವನ್ನು ದಾಟಿ ನಗರ ಪ್ರದೇಶಗಳಲ್ಲೂ ಜನಮನ್ನಣೆ ಪಡೆಯುತ್ತಿದೆ. ಈ ಕಲೆಯ ಕುರಿತು ಸಮಗ್ರವಾಗಿ ಸಂಶೋಧನೆ ನಡೆಸಿ ರವಿರಾಜ್ ಅವರು ಕೃತಿಯೊಂದನ್ನು ಹೊರಗೆ ತಂದಿರುವುದು ಹಸೆ ಚಿತ್ತಾರದ ವಿವಿಧ ಆಯಾಮಗಳ ಪರಿಚಯಕ್ಕೆ ದಾರಿ ಮಾಡಿಕೊಟ್ಟಿದೆ ಎಂದರು.
ಕೃತಿ ಕುರಿತು ಮಾತನಾಡಿದ ಚಿತ್ರಸಿರಿ ಸಂಸ್ಥೆಯ ಸಿರಿವಂತೆ ಚಂದ್ರಶೇಖರ್, ‘ಮಹಾರಾಷ್ಟ್ರದ ವರ್ಲಿ, ಬಿಹಾರದ ಮಧುಬನಿ, ಗೋವಾದ ಕಾವಿ ಸೇರಿ ಹಲವು ಕಲೆಗಳಿಗೂ ಹಸೆ ಚಿತ್ತಾರ ಕಲೆಗೂ ಕೆಲವು ಸಾಮ್ಯಗಳಿವೆ. ಈ ಕುರಿತು ರವಿರಾಜ್ ಅವರು ಕ್ಷೇತ್ರ ಕಾರ್ಯ ನಡೆಸಿ ತೌಲನಿಕ ಅಧ್ಯಯನ ಕೈಗೊಂಡಿರುವುದು ಕೃತಿಯ ಮಹತ್ವವನ್ನು ಹೆಚ್ಚಿಸಿದೆ’ ಎಂದು ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಸೆ ಚಿತ್ತಾರ ಕಲಾವಿದೆ ಲಕ್ಷ್ಮಮ್ಮ ಗಡೇಮನೆ ಅಧ್ಯಕ್ಷತೆ ವಹಿಸಿದ್ದರು. ಲೇಖಕ ರವಿರಾಜ್ ಸಾಗರ್ ಮಂಡಗಳಲೆ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ವಿ.ಟಿ. ಸ್ವಾಮಿ, ಜಾನಪದ ಅಕಾಡೆಮಿ ಸದಸ್ಯೆ ಪುಷ್ಪಲತಾ, ಸಾಹಿತಿ ಸುಬ್ರಾಯ ಹೆಗಡೆ ಮತ್ತಿಹಳ್ಳಿ ಇದ್ದರು. ಮಕ್ಕಳಿಂದ ಪ್ರತಿಭೋತ್ಸವ, ಜಾನಪದ ಗೀತೆಗಳ ಗಾಯನ ಕಾರ್ಯಕ್ರಮನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.