ಹೊಳೆಹೊನ್ನೂರು: ‘ಎಲ್ಲ ಪ್ರವಾದಿಗಳು ಮನುಷ್ಯನನ್ನು ದೇವರ ಕಡೆ ಹೋಗುವಂತೆ ಪ್ರೇರೇಪಿಸಿದರು. ಆದರೆ, ಬಸವಣ್ಣ ಮಾತ್ರ ಮನುಷ್ಯನನ್ನೇ ದೇವರು ಎಂದರು’ ಎಂದು ಗಂಗಾಂಬಿಕೆ ಬಸವರಾಜ್ ಹೇಳಿದರು.
ಸಮೀಪದ ಅರಕೆರೆಯ ಕರಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಭದ್ರಾವತಿ ತಾಲ್ಲೂಕು ಮಹಿಳಾ ಘಟಕದ ಸಹಯೋಗದಲ್ಲಿ ನಡೆದ ಬಸವಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘12ನೇ ಶತಮಾನದಲ್ಲಿ ಸಮಾನತೆಯ ಪರವಾಗಿ ನಿಂತ ಮಹಾನ್ ನಾಯಕ ಬಸವಣ್ಣ. ಜಾತಿ, ಧರ್ಮ, ಮೇಲು– ಕೀಳು, ಉಚ್ಚ– ನೀಚ, ಬಡವ– ಶ್ರೀಮಂತ ಎಂಬ ಭೇದಭಾವವಿಲ್ಲದೆ ಎಲ್ಲರಲ್ಲೂ ಸೋದರತೆಯ ಮನೋಭಾವವನ್ನು ಹುಟ್ಟುಹಾಕಲು ಹಗಲಿರುಳು ಶ್ರಮಿಸಿದರು’ ಎಂದು ಬಣ್ಣಿಸಿದರು.
‘ಆಗಲೇ ಅಂತರ್ಜಾತಿ ವಿವಾಹ ನಡೆಸಿ ಪ್ರಭಲರ ಕೆಂಗಣ್ಣಿಗೆ ಗುರಿಯಾಗಿದ್ದರೂ ಅಂಜದೆ, ಅಳುಕದೆ ತಮ್ಮ ತತ್ವ– ಸಿದ್ಧಾಂತಗಳಿಗೆ ಕಟಿಬದ್ದರಾಗಿದ್ದರು. ಅವರ ವಚನಗಳು ಇನ್ನೂ ಹತ್ತು ತಲೆಮಾರುಗಳು ಉರುಳಿದರೂ ಅಂದಿಗೂ ಅನ್ವಯವಾಗುತ್ತವೆ. ಮುಂದೊಂದು ದಿನ ಬಸವಣ್ಣ ವಿಶ್ವದ ಸಾಂಸ್ಕೃತಿಕ ನಾಯಕ ಎಂದು ಘೋಷಣೆಯಾದರೂ ಅಚ್ಚರಿ ಇಲ್ಲ’ ಎಂದರು.
ಕರಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಸಾಕಮ್ಮ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ನಾಗರತ್ನ ವಾಗೀಶ್ ಕೋಠಿ, ಶಿವಕುಮಾರ್, ಕೆ.ಎಂ. ಸಾಗರ್, ಕೆ.ಪಿ.ಕಿರಣ್ ಕುಮಾರ್, ಮಲ್ಲಾಪುರದ ಜಗದೀಶ್, ಕೂಡ್ಲಿಗೆರೆ ಜಗದೀಶ್, ಎಚ್.ಜಿ.ಮಲ್ಲಯ್ಯ, ಚನ್ನಪ್ಪಗೌಡ ಸೇರಿ ಸಮಾಜದ ಎಲ್ಲ ಪದಾಧಿಕಾರಿಗಳು, ಸಂಘ ಸಂಸ್ಥೆಯ ಪ್ರಮುಖರು, ಗ್ರಾಮಸ್ಥರು, ಸಾರ್ವಜನಿಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.