ಹೊಸನಗರ: ‘ನಾಡಿಗೆ ಬೆಳಕು ನೀಡಿದ ನಗರ ಹೋಬಳಿಯ ಅಭಿವೃದ್ಧಿಗೆ ಅರಣ್ಯ ಕಾನೂನು ತೊಡಕು ಉಂಟಾಗಿದೆ. ಇಕೋ ಟೂರಿಸಂ ಅಭಿವೃದ್ಧಿಗೆ ಒತ್ತು ನೀಡಬೇಕಿದೆ’ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹೊಸನಗರ ತಾಲ್ಲೂಕು ಘಟಕದಿಂದ ನಿಟ್ಟೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಗರ ಹೋಬಳಿಯಲ್ಲಿ ಬಿದನೂರು ಕೋಟೆ, ಚಕ್ರಾ ಫಾಲ್ಸ್, ದೇವಗಂಗೆ ಕೊಳ, ಚಕ್ರಾ ಸಾವೇಹಕ್ಲು ಡ್ಯಾಂ, ವಾರಾಹಿ ತಾಣ, ಹುಲಿಕಲ್ ಪ್ರದೇಶ, ಕೊಡಚಾದ್ರಿ ಸೇರಿ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಅಪೂರ್ವ ತಾಣಗಳಿವೆ. ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಈ ಭಾಗದ ಜನರ ಬದುಕು ಸುಧಾರಿಸುತ್ತದೆ’ ಎಂದು ಹೇಳಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿ ಬಿದನೂರು ಅಧ್ಯಕ್ಷತೆ ವಹಿಸಿದ್ದರು.
ವರದಿಗಾರ ನಾಗೇಶ್ ಎಸ್.ನಾಯಕ್, ಶಿಮುಲ್ ಅಧ್ಯಕ್ಷ ವಿದ್ಯಾಧರ್ ಅವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿಯು ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಎನ್.ರವಿಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್, ಉಪಾಧ್ಯಕ್ಷ ವೈದ್ಯ, ಆರ್.ಎಸ್.ಹಾಲಸ್ವಾಮಿ, ಜಿಲ್ಲಾ ಯುವ ಮುಖಂಡರಾದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಹಾಲಗದ್ದೆ ಉಮೇಶ್, ಮಾಮ್ಕೋಸ್ ನಿರ್ದೇಶಕ ಕೆ.ವಿ.ಕೃಷ್ಣಮೂರ್ತಿ, ಚಂದ್ರಮತಿ, ನಾಗೋಡಿ ವಿಶ್ವನಾಥ, ಜೆ.ವಿ.ಸುಬ್ರಹ್ಮಣ್ಯ, ಕೆ.ಎಸ್. ಗಣೇಶ, ಗೋಪಾಲ ಕಟ್ಟಿನಹೊಳೆ, ಸಹಶಿಕ್ಷಕ ಖಮರುಲ್ಲಾ, ನಾಗರಕೊಡಿಗೆ ರವಿ, ಅಶ್ವಿನಿಪಂಡಿತ್ ಇದ್ದರು.
ಮಾಳಕೋಡದ ಯಕ್ಷಪಲ್ಲವಿ ಟ್ರಸ್ಟ್ನಿಂದ ‘ಯಕ್ಷ– ಗಾನ– ನೃತ್ಯ– ವೈಭವ’ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.