ಶಿವಮೊಗ್ಗ: ಅಪರಾಧ ತಡೆಯುವಲ್ಲಿ ಸಿ.ಸಿ ಟಿವಿ ಕ್ಯಾಮೆರಾ ನೆರವಾಗುತ್ತವೆ. ಹೀಗಾಗಿ ಜಿಲ್ಲೆಯ ಎಲ್ಲ ಚಿನ್ನಾಭರಣ ಅಂಗಡಿಗಳಲ್ಲಿ ಸಾರ್ವಜನಿಕ ಸುರಕ್ಷತಾ ಕಾಯ್ದೆ ಅನ್ವಯ ಸಿ.ಸಿ.ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ಕುಮಾರ್ ಸೂಚಿಸಿದರು.
ನಗರದಲ್ಲಿ ಶನಿವಾರ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಶಿವಮೊಗ್ಗದ ನಗರದ ಚಿನ್ನ, ಬೆಳ್ಳಿ ಹಾಗೂ ಗಿರವಿ ವರ್ತಕರ ಸಂಘದ ಸದಸ್ಯರ ಸಭೆ ನಡೆಸಿ ಅವರ ಕುಂದುಕೊರತೆ ಆಲಿಸಿ ಮಾತನಾಡಿದರು.
ಕೆಲವು ಚಿನ್ನಾಭರಣ ಅಂಗಡಿಯವರು ಸಿ.ಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ. ಕ್ಯಾಮೆರಾ ಅಳವಡಿಸಿದಲ್ಲಿ ಯಾವುದೇ ಘಟನೆ ನಡೆದಾಗ, ತ್ವರಿತಗತಿಯಲ್ಲಿ ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಸಹಕಾರಿಯಾಗುತ್ತದೆ. ತಮ್ಮ ಸ್ವತ್ತಿನ ಸುರಕ್ಷತೆಯ ದೃಷ್ಟಿಯಿಂದ ಮನೆಗಳ ಹತ್ತಿರವೂ ಸಿಸಿ ಕ್ಯಾಮೆರಾಗಳ ಅಳವಡಿಸುವುದು ಸೂಕ್ತ ಎಂದರು.
ಚಿನ್ನಾಭರಣ ಮಾರಾಟಗಾರರು ತಮ್ಮ ಅಂಗಡಿಗಳ ಸುರಕ್ಷತೆಗಾಗಿ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವಾಗ ಮಾನ್ಯತೆ ಪಡೆದ ಮತ್ತು ಪ್ರಮಾಣೀಕೃತ ಭದ್ರತಾ ಸಂಸ್ಥೆಗಳಿಂದ ತರಬೇತಿ ಹೊಂದಿದ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು ಎಂದರು.
ಕಳ್ಳತನದಿಂದ ತಂದ ಆಭರಣಗಳನ್ನು ಮಾರಾಟ ಮಾಡಲು ಬಂದಲ್ಲಿ ಸ್ವೀಕರಿಸಬಾರದು. ಕಳ್ಳತನದ
ಆಭರಣ ಎಂಬ ಅನುಮಾನ ಬಂದಲ್ಲಿ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಿದರು.
ಡಿವೈಎಸ್ಪಿ ಬಾಲರಾಜ್, ಕೋಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಹಾಗೂ ಶಿವಮೊಗ್ಗದ ಚಿನ್ನ, ಬೆಳ್ಳಿ ಹಾಗೂ ಗಿರವಿ ವರ್ತಕರ ಸಂಘದ ಸದಸ್ಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.