ಶಿವಮೊಗ್ಗ: ನಿಷೇಧಿತ ಭಯೋತ್ಪಾದನೆ ಸಂಘಟನೆ ಐಸಿಸ್ (ISIS) ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಇಲ್ಲಿನ ಸಿದ್ದೇಶ್ವರ ನಗರ ನಿವಾಸಿ ಸಯ್ಯದ್ ಯಾಸೀನ್ ಅಲಿಯಾಸ್ ಬೈಲು (21) ಹಾಗೂ ಮಂಗಳೂರಿನ ಮಾಝ್ ಮುನೀರ್ ಅಹಮದ್ (22) ಬಂಧಿತರು. ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ನಿವಾಸಿ ಶಾರಿಕ್ ತಲೆಮರೆಸಿಕೊಂಡಿದ್ದಾನೆ.
‘ಶಿವಮೊಗ್ಗದಲ್ಲಿ ಈಚೆಗೆ ನಡೆದ ಚಾಕು ಇರಿತ ಪ್ರಕರಣದ ವಿಚಾರಣೆ ವೇಳೆ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು, ಯುಎಪಿಎ (UNLAWFUL ACTIVITIES (PREVENTION) ACT) ಕಾಯ್ದೆಯಡಿ ಬಂಧಿಸಲಾಗಿದೆ. ಇಬ್ಬರನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಸೆ. 29ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಮಾಧ್ಯಮದವರಿಗೆ ಮಾಹಿತಿ ನೀಡಿದರು.
‘ಆರೋಪಿಗಳ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ), ಕೇಂದ್ರ ಗುಪ್ತಚರ ವಿಭಾಗ (ಐಬಿ)ಯೊಂದಿಗೆ ಮಾಹಿತಿ ಹಂಚಿಕೊಂಡಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.
ಆರೋಪಿಗಳಲ್ಲಿ ಮಾಝ್ ಮುನೀರ್ ಅಹಮಸ್ ಎಂಟೆಕ್ ಪದವೀಧರ, ಸೈಯದ್ ಯಾಸೀನ್ ಎಲೆಕ್ಟ್ರಿಕಲ್ ಎಂಜಿನಿಯರ್. ಶಾರಿಕ್ ಮಂಗಳೂರಿನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದನು.
ತಲೆತಪ್ಪಿಸಿಕೊಂಡಿರುವ ಶಾರಿಕ್ ಹಾಗೂ ಮಾಝ್ ಮುನೀರ್ ಅಹಮದ್ 2020ರ ನವೆಂಬರ್ 27ರಂದು ಮಂಗಳೂರಿನ ಕದ್ರಿಯಲ್ಲಿರುವ ಕೋರ್ಟ್ ರಸ್ತೆಯ ಹಳೆ ಪೊಲೀಸ್ ಔಟ್ಪೋಸ್ಟ್ನ ಗೋಡೆಯಲ್ಲಿ ಲಷ್ಕರ್ ಎ ತಯ್ಯಬಾ ಹಾಗೂ ತಾಲಿಬಾನ್ ಪರವಾಗಿ ಗೋಡೆ ಬರಹ ಬರೆದಿದ್ದರು. ಪ್ರಕರಣದಲ್ಲಿ ಇಬ್ಬರು ಬಂಧನಕ್ಕೊಳಗಾಗಿದ್ದರು. 2021ರ ಸೆಪ್ಟೆಂಬರ್ 8 ರಂದು ತಿಂಗಳಲ್ಲಿಯೇ ಜಾಮೀನು ಪಡೆದು ಹೊರಗೆ ಬಂದಿದ್ದರು ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.