ಶಿವಮೊಗ್ಗ: ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಜನಸ್ಪಂದನಾ ಸಮಾವೇಶ ರಾಜಕೀಯ ಪ್ರೇರಿತ ಅಲ್ಲ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಸಮಾವೇಶದ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಇದು ಬಿಜೆಪಿ ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ. ದಾವಣಗೆರೆಯಲ್ಲಿ ₹ 75 ಕೋಟಿ ಖರ್ಚು ಮಾಡಿ ಸಿದ್ಧರಾಮೋತ್ಸವ ಮಾಡಿದ್ದು ರಾಜಕೀಯ ಪ್ರೇರಿತ. ಮೊದಲು ಅದರ ಲೆಕ್ಕ ಕೊಡಲಿ ಎಂದರು.
‘ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಬಗ್ಗೆ ಜನತೆಗೆ ತಿಳಿಸಲು ಜನಸ್ಪಂದನಾ ಸಮಾವೇಶ ನಡೆಸಲಾಗಿದೆ. ಸಿದ್ದರಾಮಯ್ಯ ಅವರು ಸಮಾವೇಶ ಮಾಡಿದ ಕೂಡಲೇ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಅಂತಹ ನೂರಾರು ಸಮಾವೇಶಗಳನ್ನು ಬಿಜೆಪಿ ಮಾಡಿದೆ. ಮುಂದೆಯೂ ಸಮಾವೇಶ ಮಾಡಲಿದ್ದೇವೆ’ ಎಂದರು.
‘ಕಾಲು ನೋವಿನಿಂದಾಗಿ ನಾನು ಇಂದಿನ ಸಮಾವೇಶದಲ್ಲಿ ಭಾಗವಹಿಸಿಲ್ಲ. ಶಿವಮೊಗ್ಗದ ಹಿಂದೂ ಮಹಾಸಭಾ ವಿಸರ್ಜನಾ ಮೆರವಣಿಗೆ ಹಿಂದೆಂದೂ ಕಾಣದಂತಹ ಅಪಾರ ಜನಸ್ತೋಮ ಭಾಗವಹಿಸುವುದರ ಮೂಲಕ ಯಶಸ್ವಿಯಾಗಿದೆ. ಶಾಂತಿಯುತವಾಗಿ ಮೆರವಣಿಗೆ ಪೂರ್ಣಗೊಂಡಿದೆ.ಶಿವಮೊಗ್ಗದಲ್ಲಿ ಇನ್ನು ಮುಂದೆಯೂ ಎಲ್ಲಾ ಸಮಾರಂಭಗಳು ಶಾಂತಿಯುತವಾಗಿ ನಡೆಯಲಿವೆ’ ಎಂದು ಆಶಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.