
ಹೊಸನಗರ: ಹೆಣ್ಣು ಎಂದಿಗೂ ಅಬಲೆಯಲ್ಲ. ಸ್ವಾವಲಂಬಿಯಾಗಿ ದುಡಿಮೆಯತ್ತ ಮನಸ್ಸು ಮಾಡಿದರೆ ಆರ್ಥಿಕ ಬೆಳವಣಿಗೆ ಸಾಧ್ಯ ಎಂದು ಹೊಸನಗರ ತಾಲ್ಲೂಕು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ ಹೇಳಿದರು.
ತಾಲ್ಲೂಕಿನ ಕರಿಮನೆ ಗ್ರಾಮ ಪಂಚಾಯಿತಿ ಕರವಿ ಸಂಜೀವಿನಿ ಒಕ್ಕೂಟದ ಸರ್ವ ಸದಸ್ಯರ ಸಭೆ ಮತ್ತು ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕರವಿ ಮಹಿಳಾ ಒಕ್ಕೂಟ ಸರ್ಕಾರದಿಂದ ₹15 ಲಕ್ಷ ಸಹಾಯಧನ ಪಡೆದು, ₹60 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸಿದೆ. ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ ಹಿಟ್ಟಿನ ಗಿರಣಿ, ಹೈನುಗಾರಿಕೆ ಸೇರಿದಂತೆ ಹಲವು ಉದ್ಯೋಗಳಿಗೆ ಉತ್ತೇಜನ ನೀಡಿದೆ ಎಂದರು.
ನಗರ ಠಾಣೆ ಪ್ರಭಾರ ಪಿಎಸ್ಐ ಕುಮಾರ್ ಮಾತನಾಡಿ, ‘ಸಾಮಾಜಿಕ ಜಾಲತಾಣಗಳ ಅತಿಯಾದ ಬೆಳಕೆಯು ಆರ್ಥಿಕ ಅಪರಾಧಗಳಿಗೂ ದಾರಿ ಮಾಡಿಕೊಟ್ಟಿದೆ. ಯಾವುದೇ ವ್ಯವಹಾರ, ಸಂದೇಶಗಳನ್ನು ಅನುಸರಿಸುವಾಗ ಎಚ್ಚರಿಕೆ ವಹಿಸಬೇಕು. ಅನಾಮಿಕ ಕರೆಗಳು, ಸಂದೇಶಗಳಿಗೆ ಒಟಿಪಿ, ದಾಖಲೆ ನೀಡಲು ಹೋಗಬೇಡಿ’ ಎಂದು ತಿಳಿಸಿದರು.
ಸಭೆಯಲ್ಲಿ ವಾರ್ಷಿಕ ಆರ್ಥಿಕ ಲೆಕ್ಕಪತ್ರಗಳನ್ನು ಮಂಡಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ ಗೋಪಾಲ್, ಉಪಾಧ್ಯಕ್ಷೆ ನಾಗರತ್ನ, ಸದಸ್ಯರಾದ ದೇವೇಂದ್ರನಾಯ್ಕ, ಪಿಡಿಒ ರಂಜಿತಾ ಬಿಳ್ಳೋಡಿ, ತಾಲ್ಲೂಕು ಮೇಲ್ವಿಚಾರಕ ಮನೋಹರ್, ಗುರುಪ್ರಸಾದ್, ಕೆನರಾ ಬ್ಯಾಂಕ್ ಎಫ್ಎಲ್ಸಿ ಓಬಯ್ಯ, ಎಂಬಿಕೆ ಮಾನಸ, ಗಾಯತ್ರಿ ದಿನೇಶ್, ಅಶ್ವಿನಿ ರಮೇಶ್, ಭವಾನಿ, ಒಕ್ಕೂಟದ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.