ಶಿವಮೊಗ್ಗ: ‘ದೇಶಭಕ್ತ ಭಗತ್ ಸಿಂಗ್ ಜನ್ಮ ದಿನಾಚರಣೆಯಂದೇ ಕೇಂದ್ರ ಸರ್ಕಾರ ರಾಷ್ಟ್ರದ್ರೋಹಿ ಸಂಘಟನೆ ನಿಷೇಧ ಮಾಡಿರುವುದು ಇಡೀ ದೇಶವೇ ಸಂಭ್ರಮದಿಂದ ಸ್ವಾಗತಿಸುತ್ತದೆ. ಸ್ವಾತಂತ್ರ್ಯ ಹೋರಾಟಗಾರರ ಆತ್ಮಕ್ಕೆ ಶಾಂತಿಯೂ ಸಿಕ್ಕಿದೆ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
‘ಪಿಎಫ್ಐ ಸಂಘಟನೆ ರಾಷ್ಟ್ರದ್ರೋಹದ ಕೆಲಸ ಮಾಡುತ್ತಿದ್ದು, ಇದನ್ನು ನಿಷೇಧಿಸಬೇಕೆಂದು ಬಿಜೆಪಿ ಹಲವು ಬಾರಿ ಮನವಿ ಮಾಡಿತ್ತು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಪಿಎಫ್ಐ ಸಂಘಟನೆ ದೇಶ ವಿರೋಧಿ ಚಟುವಟಿಕೆ ಜತೆಗೆ ಉಗ್ರರ ಜೊತೆ ಸಂಬಂಧ ಹೊಂದಿತ್ತು. ಹಲವು ಯುವಕರನ್ನು ದಾರಿ ತಪ್ಪಿಸಿತ್ತು. ಪ್ರಮುಖವಾಗಿ ಹಿಂದೂ ಯುವಕರ ಹತ್ಯೆಯಲ್ಲಿ ಇವರ ಪಾತ್ರವಿರುವುದು ಸ್ಪಷ್ಟವಾಗಿತ್ತು. ಇಂತಹ ರಾಷ್ಟ್ರದ್ರೋಹಿ ಸಂಘಟನೆ ನಿಷೇಧಿಸಿರುವುದಕ್ಕೆ ಎಲ್ಲ ರಾಜಕೀಯ ಪಕ್ಷಗಳು ಸ್ವಾಗತಿಸಬೇಕಾಗಿದೆ. ಅಷ್ಟೇ ಅಲ್ಲ, ರಾಷ್ಟ್ರ ಭಕ್ತ ಮುಸ್ಲಿಮರು ಕೂಡ ಇದನ್ನು ಒಪ್ಪಬೇಕು’ ಎಂದರು.
‘ರಾಜ್ಯ ಸರ್ಕಾರದ ಮೂಲಕವೂ ಕೇಂದ್ರ ಸರ್ಕಾರಕ್ಕೆ ವರದಿಯ ಮೂಲಕ ಸತ್ಯಾಂಶ ತಿಳಿಸಿತ್ತು. ಎಲ್ಲ ರಾಜ್ಯಗಳ ಅಭಿಪ್ರಾಯದಂತೆ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದ ಪಿಎಫ್ಐ ಸಂಘಟನೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧಿಕೃತವಾಗಿ ಬ್ಯಾನ್ ಮಾಡಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.