ರಿಪ್ಪನ್ ಪೇಟೆ: ಗ್ರಾಮೀಣ ಜನರ ಶಾಲಾ ಮಕ್ಕಳ ಅನುಕೂಲಕ್ಕೆ ತಕ್ಕಂತೆ ಸರ್ಕಾರಿ ಬಸ್ ಸೇವೆಯನ್ನು ಮುಂದಿನ ದಿನಗಳಲ್ಲಿ ಆದ್ಯತೆ ಮೇರೆಗೆ ಕಲ್ಪಿಸಲಾಗುವುದು ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಮಂಗಳವಾರ ಹರತಾಳು ಗ್ರಾಮದಲ್ಲಿ ಸರ್ಕಾರಿ ಬಸ್ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಟ್ಟೆ ಮಲ್ಲಪ್ಪದಿಂದ ರಿಪ್ಪನ್ ಪೇಟೆ ಮಾರ್ಗವಾಗಿ ಕಳಸೆ- ಬೆಳ್ಳೂರು ಗ್ರಾಮಾಂತರ ಸಾರಿಗೆಗೆ ಚಾಲನೆ ನೀಡಿ ಅವರು ಮಾತನಾಡಿ, ಹರತಾಳು ಗ್ರಾಮಸ್ಥರ ಬಹುವರ್ಷದ ಬೇಡಿಕೆಗೆ ನಮ್ಮ ಸರ್ಕಾರ ತಕ್ಷಣವೇ ಸ್ಪಂದಿಸಿದೆ ಎಂದರು.
ಮುಂದಿನ ದಿನದಲ್ಲಿ ಸರ್ಕಾರ ನಾಲ್ಕು ಸಾವಿರ ಹೊಸ ಬಸ್ ಖರೀದಿಗೆ ಮುಂದಾಗಿದ್ದು, ಅದರಲ್ಲಿ 50 ಬಸ್ಸುಗಳನ್ನು ಸಾಗರ ಡಿಪೋಕ್ಕೆ ಮೀಸಲಿಟ್ಟು ಪ್ರತಿ ಹಳ್ಳಿ ಹಳ್ಳಿಗೂ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಜನಸಾಮಾನ್ಯರ ಸರ್ಕಾರ: ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಕಾಂಗ್ರೆಸ್ ಸರ್ಕಾರವಲ್ಲ, ಜನಸಾಮಾನ್ಯರ ಸರ್ಕಾರ
ಚುನಾವಣೆಯ ಸಂದರ್ಭದಲ್ಲಿ ಕೊಟ್ಟ ಭರವಸೆಗಳನ್ನು ನ್ಯಾಯ ಸಮ್ಮತವಾಗಿ ಹಂತ ಹಂತ ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆದಿದೆ ಎಂದರು.
ಹರತಾಳು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಾರ್ವಜನಿಕರ ಪರವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಈ.ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು.
ಜಿ.ಪಂ. ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ನಾಗರಾಜ್, ತಾ.ಪಂ.ಮಾಜಿ ಸದಸ್ಯರಾದ ಬಿ.ಜೆ
ಚಂದ್ರಮೌಳಿ, ಏರಿಗಿ ಉಮೇಶ್, ತಹಶೀಲ್ದಾರ್ ಧರ್ಮತ ಗಂಗಾರಾಮ ಕೋರಿ, ತಾಲ್ಲೂಕು ಪಂಚಾಯಿತಿ ಇಒ ನರೇಂದ್ರ ಕುಮಾರ್, ಸಾಕಮ್ಮ, ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಅಭಿಮಾನಿ ಬಳಗದವರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.