ಶಿವಮೊಗ್ಗ: ದೂರ ಶಿಕ್ಷಣ ವಿಭಾಗದ 2019–20ನೇ ಸಾಲಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೇ ಪ್ರಕಟಿಸಿದ್ದ ಫಲಿತಾಂಶವನ್ನು ತಡೆ ಹಿಡಿಯಲು ಕುವೆಂಪು ವಿಶ್ವವಿದ್ಯಾಲಯ ನಿರ್ಧರಿಸಿದೆ.
ಫಲಿತಾಂಶ ಹಿಂಪಡೆಯುವ ಕುರಿತು ಸಿಂಡಿಕೇಟ್, ವಿದ್ಯಾ ವಿಷಯಕ ಪರಿಷತ್ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ಪರೀಕ್ಷೆ ನಡೆಸದೇ ಫಲಿತಾಂಶ ಪ್ರಕಟಿಸಲು ನಿರ್ದೇಶನ ನೀಡುವಂತೆ ಕೆಲವು ವಿದ್ಯಾರ್ಥಿಗಳು ಹಿಂದೆ ಹೈಕೋರ್ಟ್ ಮೊರೆಹೋಗಿದ್ದರು. ಕೋರ್ಟ್ ಆದೇಶ ನೋಡಿಕೊಂಡು, ಕಾನೂನು ತಜ್ಞರ ಸಲಹೆ ಪಡೆದು ಡಿಸೆಂಬರ್ ಅಂತ್ಯದ ಒಳಗೆ ಪರೀಕ್ಷೆ ನಡೆಸಲಾಗುವುದು ಎಂದು ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಕೋವಿಡ್ ಸಮಯದಲ್ಲಿ 2019–20ನೇ ಸಾಲಿನ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೇ ತೇರ್ಗಡೆ ಮಾಡಲು ಯುಜಿಸಿ ಅವಕಾಶ ಕಲ್ಪಿಸಿತ್ತು. ಅಂದು ಫಲಿತಾಂಶ ಪ್ರಕಟಿಸಲು ವಿಳಂಬವಾಗಿತ್ತು. ಈಗ ಅದನ್ನು ಜಾರಿ ಮಾಡಿದ್ದೆವು. ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಕುರಿತು ಸಿಂಡಿಕೇಟ್ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು ಅಂತಿಮವಾಗಿ ಫಲಿತಾಂಶ ತಡೆಹಿಡಿಯಲು ನಿರ್ಧಾರ ಕೈಗೊಳ್ಳಲಾಗಿದೆ.ಮುಂದೆ ಇಂತಹ ಅಚಾತುರ್ಯ ನಡೆಯದಂತೆ ಎಚ್ಚರ ವಹಿಸಲಾಗುವುದು’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವೆ ಜಿ.ಆನುರಾಧಾ, ಪರೀಕ್ಷಾಂಗ ಕುಲಸಚಿವ ನವೀನ್ ಕುಮಾರ್, ಸಿಂಡಿಕೇಟ್ ಸದಸ್ಯರಾದ ಬಳ್ಳೇಕೆರೆ ಸಂತೋಷ್, ಧರ್ಮಪ್ರಸಾದ್, ರಮೇಶ್ಬಾಬು, ರಾಮಲಿಂಗಪ್ಪಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.