ADVERTISEMENT

ಕುವೆಂಪು ವಿಶ್ವವಿದ್ಯಾಲಯ | ಚಿನ್ನ: ‘ಕನ್ನಡ’ ಹುಡುಗಿಯರದ್ದೇ ಪಾರುಪತ್ಯ

31 ಹಾಗೂ 32ನೇ ಘಟಿಕೋತ್ಸವ ನಾಳೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 4:36 IST
Last Updated 15 ಜೂನ್ 2022, 4:36 IST
ಪ್ರೊ.ಬಿ.ಪಿ.ವೀರಭದ್ರಪ್ಪ
ಪ್ರೊ.ಬಿ.ಪಿ.ವೀರಭದ್ರಪ್ಪ   

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ 31 ಮತ್ತು 32ನೇ ಘಟಿಕೋತ್ಸವದಲ್ಲಿ ಕನ್ನಡ ವಿಭಾಗದ ವಿದ್ಯಾರ್ಥಿನಿಯರೇ ಅತಿ ಹೆಚ್ಚು ಚಿನ್ನದ ಪದಕಗಳ ಸೂರೆಗೈದಿದ್ದಾರೆ.

31ನೇ ಘಟಿಕೋತ್ಸವದಲ್ಲಿ ಕನ್ನಡ ಭಾರತಿ ವಿಭಾಗದ ಎಂ.ಟಿ. ಪ್ರಣೀತಾ ಎಂಟು ಚಿನ್ನದ ಪದಕಗಳೊಂದಿಗೆ ಎರಡು ನಗದು ಬಹುಮಾನ ಪಡೆದರೆ, 32ನೇ ಘಟಿಕೋತ್ಸವದಲ್ಲಿ ಅದೇ ವಿಭಾಗದ ಎಚ್.ಎನ್. ದಿವ್ಯಾ 11 ಚಿನ್ನದ ಪದಕಗಳಿಗೆ ಕೊರಳೊಡ್ಡುತ್ತಿದ್ದು, ಎರಡು ನಗದು ಬಹುಮಾನಗಳನ್ನೂ ಬಾಚಿಕೊಂಡಿದ್ದಾರೆ.

ಜೂನ್ 16ರಂದು ಬೆಳಿಗ್ಗೆ 10.30ಕ್ಕೆ ಜ್ಞಾನ ಸಹ್ಯಾದ್ರಿ ಆವರಣದ ಬಸವ ಸಭಾಭವನದಲ್ಲಿ ನಡೆಯುವ ಘಟಿಕೋತ್ಸವದಲ್ಲಿ ರಾಜ್ಯಪಾಲ ಥ್ಯಾವರ್‌ ಚಂದ್ ಗೆಹ್ಲೋಟ್ ರ‍್ಯಾಂಕ್ ವಿಜೇತರಿಗೆ ಪದಕ ಪ್ರದಾನ ಮಾಡುವರು ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ವಿವರ ನೀಡಿದರು.

ADVERTISEMENT

31ನೇ ಘಟಿಕೋತ್ಸವ: 91 ಅಭ್ಯರ್ಥಿಗಳು ಪಿಎಚ್‌.ಡಿ ಪದವಿ, 25,435 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. ಎಂಬಿಎ ವಿಭಾಗದ ಯತೀಶ್ ಕೆ.ಯು, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ಅನುಷಾ ಎಸ್, ಎನ್ಇಎಸ್ ಸಂಸ್ಥೆಯ ಬಿ.ಕಾಂ ವಿದ್ಯಾರ್ಥಿನಿ ನಿವ್ಯಾ ಕೆ. ನಾಯಕ್ ತಲಾ ಐದು ಸ್ವರ್ಣಪದಕ ಪಡೆದಿದ್ದಾರೆ.

ಗಣಿತ ಶಾಸ್ತ್ರ ಅಧ್ಯಯನ ವಿಭಾಗದ ಬಿ.ಎನ್. ಉಷಾ ನಾಲ್ಕು ಚಿನ್ನ ಹಾಗೂ ಮೂರು ನಗದು ಬಹುಮಾನ ಪಡೆದಿದ್ದಾರೆ. ಸಮಾಜಶಾಸ್ತ್ರ ವಿಭಾಗದ ನವೀನ್ ಕುಮಾರ್ ಸಿ, ಸಸ್ಯಶಾಸ್ತ್ರ ವಿಭಾಗದ ರಕ್ಷಿತ್ ಎಚ್.ಎಂ. ಜೈನ್, ರಸಾಯನ ಶಾಸ್ತ್ರ ವಿಭಾಗದಲ್ಲಿ ದಿವ್ಯಾ ಎಂ.ಸಿ, ಪರಿಸರ ವಿಜ್ಞಾನ ವಿಭಾಗದಲ್ಲಿ ಸಂಪದ ಶಾಸ್ತ್ರಿ ಬಿ.ಎಸ್. ತಲಾ ನಾಲ್ಕು ಚಿನ್ನದ ಪದಕ ಪಡೆದಿದ್ದಾರೆ.

ಸೌರಭ ಎಸ್. ಕಾಮತ್, ಅಬ್ದುಲ್ ಫತಾ, ಶ್ವೇತಾ ಎಸ್., ಸರಳಾ ವೈ.ಪಿ, ಸಂಜನಾ ಕೆ. ತಲಾ ಮೂರು ಸ್ವರ್ಣ ಪದಕ ಪಡೆದಿದ್ದಾರೆ.

32ನೇ ಘಟಿಕೋತ್ಸವ: 129 ಅಭ್ಯರ್ಥಿಗಳು ಪಿಎಚ್.ಡಿ ಪಡೆಯಲು ಅರ್ಹರಾಗಿದ್ದಾರೆ. ಒಟ್ಟು 20,638 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ.

ಎಂಬಿಎ ವಿಭಾಗದ ಪ್ರಿಯಾಂಕ ಟಿ.ಆರ್‌, ಎಂಎ ಸಮಾಜಶಾಸ್ತ್ರ ವಿಭಾಗದ ತನುಷಾ ಸಿ, ರಸಾಯನಶಾಸ್ತ್ರ ವಿಭಾಗದ ಸಂಯುಕ್ತ ಪೈ ಎಂ. ಹಾಗೂ ಎಟಿಎನ್‌ಸಿಸಿಯ ಬಿ.ಕಾಂ ವಿಭಾಗದ ಮೇಘನಾ ತಲಾ ಐದು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಗಣಿತಶಾಸ್ತ್ರ ವಿಭಾಗದ ಎನ್.ಸಿಂಧೂ ನಾಲ್ಕು ಚಿನ್ನ, ಎರಡು ನಗದು ಬಹುಮಾನ, ರಾಜ್ಯಶಾಸ್ತ್ರ ವಿಭಾಗದ ಎಂ. ಅಶ್ವಿನಿ , ಪರಿಸರ ವಿಜ್ಞಾನ ವಿಭಾಗದ ಎಸ್. ಪೂಜಾ ತಲಾ ನಾಲ್ಕು ಚಿನ್ನದ ಪದಕ ಪಡೆದಿದ್ದಾರೆ. ಬಿ.ಇಡಿ ವಿಭಾಗದಲ್ಲಿ ಆಯಿಷಾ ಫರ್‌ಹಿನ್ ಶೇಖ್ ಮೂರು ಸ್ವರ್ಣ, 1 ನಗದು ಬಹುಮಾನ ಪಡೆದಿದ್ದಾರೆ.

ಅಂಜುಮ್ ಬಷೀರ್ ಸಾಬ್, ಆಲಿಷಾ ಜೋಸೆಫ್, ಕೆ.ಎ.ಗಾಯಿತ್ರಿ, ಸಿ.ಕೆ.ರಂಜಿತಾ, ಎಂ.ಯಶಸ್ವಿನಿ, ಎಂ.ರುಚಿತಾಶ್ರೀ, ಬಿ.ಎಂ.ಸೃಷ್ಟಿ ತಲಾ ಮೂರು ಚಿನ್ನದ ಪದಕ ಪಡೆದಿದ್ದಾರೆ ಎಂದು ಅವರು ತಿಳಿಸಿದರು.

ಎರಡೂ ಅವಧಿಯಲ್ಲಿ ದೂರಶಿಕ್ಷಣ ನಿರ್ದೇಶನಾಲಯದಡಿ ಕಲೆ, ವಾಣಿಜ್ಯ, ಕಾನೂನು, ವಿಜ್ಞಾನ ವಿಭಾಗದಡಿ 20,111 ವಿದ್ಯಾರ್ಥಿಗಳು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆಯಲು ಅರ್ಹರಾಗಿದ್ದಾರೆ.

ಕುಲಸಚಿವೆ ಜಿ.ಅನುರಾಧಾ, ಮೌಲ್ಯಮಾಪನ ಕುಲಸಚಿವ ಪ್ರೊ. ನವೀನ್ ಕುಮಾರ್, ಉಪ ಕುಲಸಚಿವ ಡಾ.ಕೆ.ಆರ್.ಮಂಜುನಾಥ್, ಪಿಆರ್‌ಒ ಸತ್ಯಪ್ರಕಾಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.