ಕೋಣಂದೂರು: ಸಮೀಪದ ಆಲೂರು ಗ್ರಾಮದ ಆಲೂರು-ಹೊಸಕೊಪ್ಪದಲ್ಲಿ 60 ವರ್ಷಗಳಿಂದ ಬಗರ್ಹುಕುಂ ಸಾಗುವಳಿ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಜಮೀನು ಮಂಜೂರು ಮಾಡಿಬೇಕು ಎಂದು ಸಂತ್ರಸ್ತರ ನಿಯೋಗ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಭಾನುವಾರ ಮನವಿ ಸಲ್ಲಿಸಿತು.
‘ಸಾಗರ ತಾಲ್ಲೂಕು ಲಿಂಗನಮಕ್ಕಿ, ಬಾರಂಗಿ ಹೋಬಳಿಯ ಹಂಸೆ, ಕಸಬಾ ಹೋಬಳಿ ಬಡೇನಗರ, ಕ್ಯಾದಗೆಪುರ, ಕೆಸರೆ, ಆವಿನಹಳ್ಳಿ, ಕುದುರೆ ಬೀರಪ್ಪ ಸರ್ಕಲ್ ಮುಂತಾದ ಗ್ರಾಮಗಳಲ್ಲಿ ವಾಸವಿದ್ದು, ಮುಳುಗಡೆ ಸಮಯದಲ್ಲಿ ಮನೆ, ಜಮೀನು ಕಳೆದುಕೊಂಡು ಇಲ್ಲಿಗೆ ಬಂದಿದ್ದೇವೆ. ರಾಜ್ಯಕ್ಕೆ ವಿದ್ಯುಚ್ಛಕ್ತಿ ನೀಡುವ ಉದ್ದೇಶದಿಂದ ಲಿಂಗನಮಕ್ಕಿ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ಎಲ್ಲವನ್ನೂ ಕಳೆದುಕೊಂಡೆವು. ಮುಳುಗಡೆಯಾದ 22ಕ್ಕೂ ಹೆಚ್ಚು ಕುಟುಂಬಗಳಿಗೆ ಇದುವರೆಗೂ ಸರ್ಕಾರದಿಂದ ಯಾವುದೇ ಸೌಲಭ್ಯವಾಗಲೀ, ಜಮೀನಾಗಲೀ ಮಂಜೂರಾಗಿಲ್ಲ’ ಎಂದು ಅಳಲು ತೋಡಿಕೊಂಡರು.
‘ಹೊಸಕೊಪ್ಪ ಗ್ರಾಮದ ಸರ್ವೆ ನಂ. 16, 29, 37ರಲ್ಲಿ ಬಗರ್ಹುಕುಂ ಸಾಗುವಳಿ ಮಾಡುತ್ತಿದ್ದು, ಸರ್ಕಾರಕ್ಕೆ ಟಿ.ಟಿ. ಸಂದಾಯ ಮಾಡಿದ್ದೇವೆ. ಟಿ.ಟಿ. ಪಹಣಿ ಸಹ ನಮ್ಮ ಹೆಸರಿನಲ್ಲಿ ನಮೂದಾಗಿರುತ್ತದೆ. ಬಗರ್ಹುಕುಂ ಸಾಗುವಳಿ ಅರ್ಜಿ ಸಂಖ್ಯೆ 50 ಮತ್ತು 53, 57ರಲ್ಲಿ ಬಗರ್ಹುಕುಂ ಸಕ್ರಮೀಕರಣ ಕಾಯ್ದೆ ಅಡಿಯಲ್ಲಿ ಜಮೀನು ಮಂಜೂರು ಮಾಡಲು ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮುಳುಗಡೆ ಸಂತ್ರಸ್ತರಾದ ನಮಗೆ ಆದ್ಯತೆಯ ಮೇರೆಗೆ ಜಮೀನು ಮಂಜೂರು ಮಾಡಬೇಕು. ಸರ್ಕಾರದಿಂದ ನೇಮಕವಾದ ವಿಶೇಷಾಧಿಕಾರಿಗಳಿಗೆ ಸಮಸ್ಯೆಯ ಗಂಭೀರತೆಯನ್ನು ತಿಳಿಸಿಕೊಟ್ಟು ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಮನವಿ ಮಾಡಿದರು.
ಸಂತ್ರಸ್ತರಾದ ರಾಮಕೃಷ್ಣ ಭಂಡಾರಿ, ಎಚ್.ಬಿ. ಓಂಕೇಶ, ದೇವೇಂದ್ರ ನಾಯ್ಕ, ಕೃಷ್ಣಮೂರ್ತಿ ಭಂಡಾರಿ, ನಾಗರಾಜ ಭಂಡಾರಿ, ಈಶ್ವರ ಭಂಡಾರಿ, ಮಂಜಪ್ಪ ಭಂಡಾರಿ, ಪತ್ರಕರ್ತ ಹೊಸಕೊಪ್ಪ ಶಿವು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.