ADVERTISEMENT

ಪುರಲೆ ಒತ್ತುವರಿ ಜಾಗ ಪರಿಶಿಷ್ಟರಿಗೆ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 10:53 IST
Last Updated 24 ನವೆಂಬರ್ 2020, 10:53 IST
ಶಿವಮೊಗ್ಗದಲ್ಲಿ ಮಂಗಳವಾರ ಪಾಲಿಕೆ ಕಾಂಗ್ರೆಸ್ ಸದಸ್ಯರು ಪುರಲೆ ಗ್ರಾಮಠಾಣಾ ಒತ್ತುವರಿ ಜಾಗ ಬಡವರಿಗೆ ನೀಡಲು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗದಲ್ಲಿ ಮಂಗಳವಾರ ಪಾಲಿಕೆ ಕಾಂಗ್ರೆಸ್ ಸದಸ್ಯರು ಪುರಲೆ ಗ್ರಾಮಠಾಣಾ ಒತ್ತುವರಿ ಜಾಗ ಬಡವರಿಗೆ ನೀಡಲು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.   

ಶಿವಮೊಗ್ಗ: ಪುರಲೆಯಲ್ಲಿನ ಗ್ರಾಮಠಾಣಾ ಜಾಗದ ಒತ್ತುವರಿ ತೆರವುಗೊಳಿಸಿ, ಬಡವರಿಗೆ ಮನೆ ಕಟ್ಟಿಕೊಳ್ಳಲು ನೀಡಬೇಕು ಎಂದು ಒತ್ತಾಯಿಸಿ ನಗರಪಾಲಿಕೆ ವಿರೋಧ ಪಕ್ಷದ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪುರಲೆ ಗ್ರಾಮದ ಸರ್ವೆ ನಂಬರ್ 35 ಮತ್ತು 34ರಲ್ಲಿ 1.26 ಗುಂಟೆ ಗ್ರಾಮ ಠಾಣಾ ಜಾಗ ಪಾಲಿಕೆಗೆ ಸೇರಿದೆ. ಪಕ್ಕದ ಲೇಔಟ್ ಮಾಲೀಕರು ರಸ್ತೆ ಮಾಡಿಕೊಂಡಿದ್ದಾರೆ. ಕೆಲವರು ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಅಲ್ಲಿರುವ ಪರಿಶಿಷ್ಟ ಜಾತಿ, ಪಂಗಡದ ಜನರನ್ನು ಒಕ್ಕಲೆಬ್ಬಿಸಲಾಗಿದೆ. ಉಳಿದವರ ಮನೆಗಳನ್ನು ತೆರವುಗೊಳಿಸದೆ ತಾರತಮ್ಯ ಮಾಡಲಾಗಿದೆ ಎಂದು ದೂರಿದರು.

ಬಡವರು, ದಲಿತರು, ಶೋಷಿತರ ಪರವಾಗಿ ನಿಲ್ಲಬೇಕಾದ ನಗರ ಪಾಲಿಕೆ ಆಡಳಿತ ಭೂ ಮಾಫಿಯಾ, ಶ್ರೀಮಂತರು, ಭೂಗಳ್ಳರ ಪರವಾಗಿ ನಿಂತಿದೆ ಎಂದು ಆರೋಪಿಸಿದರು.

ADVERTISEMENT

ಬಡವರು, ಶ್ರೀಮಂತರ ಮಧ್ಯೆ ಭೇದ ಮಾಡಲಾಗಿದೆ.ತಾರತಮ್ಯದ ಕಾರಣ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ಸೃಷ್ಟಿಯಾಗಿದೆ. ಪಾಲಿಕೆ, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಜಂಟಿ ಸರ್ವೆ ಮಾಡಬೇಕು. ಒತ್ತುವರಿ ತೆರವುಗೊಳಿಸಬೇಕು. ಅಲ್ಲಿ ವಾಸಮಾಡುತ್ತಿದ್ದ ಪರಿಶಿಷ್ಟರಿಗೆ ಆಶ್ರಯ ಯೋಜನೆ ಅಡಿ ಸೂರು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್‌.ಸಿ.ಯೋಗೇಶ್, ಸದಸ್ಯರಾದ ಮಂಜುಳಾ ಶಿವಣ್ಣ, ಕಾಂಗ್ರೆಸ್ ಪಕ್ಷದ ಮುಖಂಡರಾದ ಶರೀಫ್‌, ಪವನ್ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.