ಶಿವಮೊಗ್ಗ: ತಾಲ್ಲೂಕಿನ ಹರಮಘಟ್ಟ ಗ್ರಾಮದಲ್ಲಿನಾಲ್ಕು ವರ್ಷದ ಗಂಡು ಚಿರತೆಯೊಂದು ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಬಿದ್ದಿದೆ.
ಹೊಳಲೂರು ಹೋಬಳಿಯ ಈ ಭಾಗದಲ್ಲಿ ಕಳೆದ 15 ದಿನಗಳಿಂದ ಮೂರು ಹಸುಗಳನ್ನು ಚಿರತೆ ಕೊಂದಿತ್ತು. ಹೀಗಾಗಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಗ್ರಾಮಸ್ಥರು ಚಿರತೆ ಹಿಡಿಯಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ಹರಮಘಟ್ಟ ಗ್ರಾಮದ ಹೊರವಲಯದಲ್ಲಿ ಬೋನು ಇರಿಸಿ ಅದರಲ್ಲಿ ನಾಯಿ ಇಡಲಾಗಿತ್ತು. ಶುಕ್ರವಾರ ಬೆಳಿಗ್ಗೆ ಚಿರತೆ ಬೋನಿಗೆ ಬಿದ್ದಿದೆ.
ಸೆರೆ ಹಿಡಿದ ಚಿರತೆಯನ್ನು ಕೆಲ ಹೊತ್ತು ಊರಿನ ಅಗಸೆ ಬಾಗಿಲಿಗೆ ತಂದಿರಿಸಲಾಗಿತ್ತು. ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಊರಿನವರು ಅದನ್ನು ನೋಡಲು ಗುಂಪು ಗುಂಪಾಗಿ ಬಂದಿದ್ದರು.
‘ಬೋನಿಗೆ ಬಿದ್ದಿರುವ ಚಿರತೆಯನ್ನು ಸದ್ಯ ತ್ಯಾವರೆಕೊಪ್ಪದ ಹುಲಿ–ಸಿಂಹಧಾಮದಲ್ಲಿ ಇಡಲಾಗಿದೆ. ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿ ನಂತರ ಕಾಡಿಗೆ ಬಿಡಲಾಗುವುದು. ಅದಕ್ಕೂ ಮುನ್ನ ಚಿರತೆಗೆ ಚಿಪ್ ಅಳವಡಿಸಲಿದ್ದೇವೆ. ಅದು ಮತ್ತೆ ಕಾಡು ಬಿಟ್ಟು ಹೊರಗೆ ಬಂದರೆ ಗೊತ್ತಾಗಲಿದೆ’ ಎಂದು ಡಿಸಿಎಫ್ ಇ.ಶಿವಶಂಕರ್ ‘ಪ್ರಜಾವಾಣಿ‘ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.