ತೀರ್ಥಹಳ್ಳಿ: ‘ತಮ್ಮ ಚಿಂತನೆಯಿಂದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ನಮ್ಮ ನಡುವೆ ಜೀವಂತವಾಗಿದ್ದಾರೆ. ದೇಶದಲ್ಲಿ ಗಾಂಧಿ ಕಲ್ಪನೆಯ ವ್ಯಸನಮುಕ್ತ ಸಂಪದ್ಭರಿತ ರಾಮರಾಜ್ಯವಾಗಿ ನಿರ್ಮಾಣವಾಗಲಿ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆಶಿಸಿದರು.
ಪಟ್ಟಣದ ತುಂಗಾ ತೀರದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಗಾಂಧಿ, ಶಾಸ್ತ್ರಿ ಜಯಂತಿ ಅಂಗವಾಗಿ ಸ್ವಚ್ಛತಾ ಹಾಗೂ ಗಿಡ ನೆಡುವ ಕಾರ್ಯಕ್ರಮ, ಬಿ.ಸಿ. ಟ್ರಸ್ಟ್ನಿಂದ ಗಾಂಧಿ ಸ್ಮೃತಿ ಹಾಗೂ ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದುಶ್ಚಟಗಳಿಂದ ದೂರವಾಗುವ ಅನೇಕ ಕಾನೂನುಗಳನ್ನು ಸರ್ಕಾರ ಜಾರಿಗೆ ತಂದಿದೆ. ಈಚೆಗೆ ಅಂತರ್ಜಾಲದ ಮೂಲಕ ಲಾಟರಿ, ಬೆಟ್ಟಿಂಗ್ ನಡೆಯುತ್ತಿದೆ. ಅದನ್ನು ನಿಯಂತ್ರಿಸುವ ಉದ್ದೇಶದಿಂದ ಆನ್ಲೈನ್ ಜೂಜು ನಿಷೇಧ ತಿದ್ದುಪಡಿ ಮಸೂದೆ ಮಂಡಿಸಲಾಗಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬಿ.ಸಿ. ಟ್ರಸ್ಟ್ಗಳು ನವಜೀವನ ಕಾರ್ಯಕ್ರಮದ ಮೂಲಕ ದುಶ್ಚಟಕ್ಕೆ ಬಲಿಯಾದ ವ್ಯಕ್ತಿಗಳನ್ನು ವ್ಯಸನಮುಕ್ತರನ್ನಾಗಿಸಿ ಗಾಂಧಿ ಕಲ್ಪನೆಯ ರಾಮರಾಜ್ಯ ನಿರ್ಮಾಣ ಮಾಡುವುದರಲ್ಲಿ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಸಂದೇಶ್ ಜವಳಿ, ರಾಘವೇಂದ್ರ ಸೊಪ್ಪುಗುಡ್ಡೆ, ಜ್ಯೋತಿ ಮೋಹನ್, ಜೋತಿ ಗಣೇಶ್, ತಹಶೀಲ್ದಾರ್ ಡಾ. ಶ್ರೀಪಾದ್, ಡಿವೈಎಸ್ಪಿ ಶಾಂತವೀರ್, ಬಿಇಒ ಆನಂದಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ನಟರಾಜ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಹೇಮಲತಾ, ಪ್ರಗತಿಪರ ಕೃಷಿಕ ಕೂಳೂರು ಸತ್ಯನಾರಾಯಣ್ ರಾವ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.