ಸಾಗರ: ಇಲ್ಲಿನ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ದಾಖಲಾಗುವ ರೋಗಿಗಳ ಅನುಕೂಲಕ್ಕಾಗಿ ಗ್ರಂಥಾಲಯವನ್ನು ಆರಂಭಿಸಲಾಗಿದೆ.
ಮಂಗಳವಾರ ಗ್ರಂಥಾಲಯವನ್ನು ಉದ್ಘಾಟಿಸಿದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪ್ರಕಾಶ್ ಬೋಸ್ಲೆ, ‘ಕೊರೊನಾ ಸೋಂಕಿನ ಲಕ್ಷಣವಿದ್ದರೂ ಪರೀಕ್ಷೆ ಮಾಡಿಸದೆ ನಂತರ ಪರಿಸ್ಥಿತಿ ತೀರಾ ಬಿಗಡಾಯಿಸಿದಾಗ ಸರ್ಕಾರಿ ಆಸ್ಪತ್ರೆಗೆ ಕೆಲವರು ದಾಖಲಾಗುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಬಂದವರೆನ್ನಲ್ಲ ಒಳರೋಗಿಗಳನ್ನಾಗಿ ದಾಖಲು ಮಾಡಿಕೊಳ್ಳಲಾಗುತ್ತಿದೆ ಎಂಬ ತಪ್ಪು ಕಲ್ಪನೆ ಕೆಲವರಲ್ಲಿದೆ’ ಎಂದು
ಹೇಳಿದರು.
ಆರೋಗ್ಯದಲ್ಲಿ ಏರುಪೇರಾದರೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯಲು ಮುಂದಾಗಬೇಕು. ಕೋವಿಡ್ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ ಎಂದು ಕೆಲವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಮತ್ತೆ ಕೆಲವರು ಮನೆಯಲ್ಲೇ ಇದ್ದು ತಪ್ಪು ಔಷಧ ಪಡೆಯುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ ಎಂಬುದನ್ನು ಮರೆಯಬಾರದು
ಎಂದು ಹೇಳಿದರು.
ವೈದ್ಯರು ಸೂಚಿಸಿದ
ಔಷಧಗಳನ್ನು ಕಾಲ ಕಾಲಕ್ಕೆ ಪಡೆದು ಸರಿಯಾದ ರೀತಿಯಲ್ಲಿ ವಿಶ್ರಾಂತಿ ಪಡೆದರೆ ಕೋವಿಡ್ನಿಂದ ಶೀಘ್ರವಾಗಿ ಗುಣಮುಖರಾಗಬಹುದು. ಕಾಯಿಲೆ ಬಂದಿದೆ ಎಂದು ಭಯಪಡುವ ಅಗತ್ಯವಿಲ್ಲ.ಕೋವಿಡ್ ವಾರ್ಡ್ಗೆ ದಾಖಲಾಗುವ ರೋಗಿಗಳ ಮಾನಸಿಕ ಸ್ಥೈರ್ಯ ಹೆಚ್ಚಿಸಬೇಕು ಎಂಬ ದೃಷ್ಟಿಯಿಂದ ಅಲ್ಲಿಯೇ ಗ್ರಂಥಾಲಯ ತೆರೆಯಲಾಗಿದೆ
ಎಂದು ತಿಳಿಸಿದರು.
ಆರೋಗ್ಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಮ.ಸ. ನಂಜುಂಡಸ್ವಾಮಿ, ‘ರವೀಂದ್ರ ಪುಸ್ತಕಾಲಯ, ಆರೋಗ್ಯ ಇಲಾಖೆ ನೌಕರರ ಸಂಘ, ಸಹೃದಯ ಬಳಗ, ಶಾಸಕ ಎಚ್.ಹಾಲಪ್ಪ ಹರತಾಳು ಸೇರಿ ಹಲವರು ಆಸ್ಪತ್ರೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಕೋವಿಡ್ ವಾರ್ಡ್ನಲ್ಲಿ ಗ್ರಂಥಾಲಯ ತೆರೆದಿರುವುದು ರಾಜ್ಯದಲ್ಲೇ ಪ್ರಥಮ’ ಎಂದು
ಹೇಳಿದರು.
ಆರೋಗ್ಯ ಇಲಾಖೆ ನೌಕರರ ಸಂಘದ ತಾಲ್ಲೂಕು ಶಾಖೆ ಅಧ್ಯಕ್ಷ ವೈ. ಮೋಹನ್, ಪ್ರಮುಖರಾದ ಜುಬೇದಾ ಆಲಿ, ಗುರುಶಾಂತಪ್ಪ, ರಾಜಶೇಖರ ಎಚ್. ಈಳಿಗೇರ್, ರವಿ ಆರ್.ಎನ್. ಬಾಲಚಂದ್ರ, ರವಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.