ಶಿವಮೊಗ್ಗ:ಸಿಂಥೆಟಿಕ್ ಟ್ರ್ಯಾಕ್ನ ನೆಪವೊಡ್ಡಿ ನೆಹರೂ ಒಳಾಂಗಣ ಕ್ರೀಡಾಂಗಣವನ್ನು ಸಂಘ–ಸಂಸ್ಥೆಗಳು ಹಾಗೂ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಚಟುವಟಿಕೆಗೆ ನಿರಾಕರಿಸುತ್ತಿರುವುದನ್ನು ಖಂಡಿಸಿ ಕ್ರೀಡಾಧಿಕಾರಿಗಳ ವಿರುದ್ಧ ಭಾನುವಾರ ನೆಹರೂ ಒಳಾಂಗಣ ಎದುರು ಶಿವಮೊಗ್ಗ ಸಿಟಿ ಕರಾಟೆಅಸೋಸಿಯೇಷನ್ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಮಾರ್ಟ್ ಸಿಟಿ ಅಡಿಯಲ್ಲಿ 4 ಶಟಲ್ ಕೋರ್ಟ್ಗಳಿಗೆ ಸಿಂಥೆಟಿಕ್ ಹಾಕಲಾಗುತ್ತಿದೆ ಎಂಬ ನೆಪ ಹೇಳುತ್ತಾ ಕ್ರೀಡಾಧಿಕಾರಿ ಬಹು ಬಳಕೆಗಾಗಿ ಇದ್ದ ನೆಹರೂ ಒಳಾಂಗಣ ಕ್ರೀಡಾಂಗಣವನ್ನು ಕೆಲವೇ ಕ್ರೀಡಾಕೂಟಗಳಿಗೆ ಸೀಮಿತ ಮಾಡುತ್ತಿದ್ದಾರೆ ಎಂದು ಪ್ರತಿಭಟನಕಾರರು ದೂರಿದರು.
‘ಕ್ರೀಡಾಂಗಣವನ್ನು ಕೇವಲ ಶಟಲ್ ಬ್ಯಾಡ್ಮಿಂಟನ್ಗಾಗಿ ಮಾತ್ರ ಮಾಡಲಾಗಿದೆ ಎಂಬಂತೆ ಅಧಿಕಾರಿ ವರ್ತಿಸುತ್ತಿದ್ದಾರೆ. ಒಳಾಂಗಣ ಕ್ರೀಡಾಂಗಣದ ಬೈಲಾದಲ್ಲಿ ಬಹು ಬಳಕೆಗಾಗಿ ಎಂದುಹೇಳಲಾಗಿದೆ. ಇದನ್ನು ಮರೆತಿರುವ ಕ್ರೀಡಾಧಿಕಾರಿ ಈಗ ಶಟಲ್ ಕೋರ್ಟ್ಗಳಿಗೆ ಸಿಂಥೆಟಿಕ್ ಹಾಕಲಾಗುತ್ತಿದ್ದು, ಸಿಂಥೆಟಿಕ್ ಹಾಕಿದ ನಂತರ ಇತರ ಕ್ರೀಡಾ ಚಟುವಟಿಕೆ ನಡೆಸಲು ಆಗುವುದಿಲ್ಲ ಎನ್ನುತ್ತಿದ್ದಾರೆ’ ಎಂದು ಆರೋಪಿಸಿದರು.
ಸಿಂಥೆಟಿಕ್ ಮೇಲೆ ಒಂದು ಇಂಚಿನ ಮ್ಯಾಟ್ ಹಾಸಿದರೆ ಯಾವುದೇ ಕ್ರೀಡೆ ನಡೆಸಬಹುದು. ಇದರಿಂದ ದಸರಾ ಕ್ರೀಡಾ ಕೂಟಗಳು, ಪದವಿಪೂರ್ವ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಕರಾಟೆ ಪಂದ್ಯಗಳನ್ನುಆಯೋಜಿಸಲು ಸಾಧ್ಯವಾಗುತ್ತಿಲ್ಲ.ಕ್ರೀಡಾಂಗಣದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಮೊದಲು ಕ್ರೀಡಾ ಸಂಸ್ಥೆಗಳ ಪ್ರಮುಖರ ಸಭೆ ಕರೆದು ವಿಷಯ ತಿಳಿಸಬೇಕಾಗಿತ್ತು. ಅದನ್ನು ಮಾಡದೆ ಈಗಕ್ರೀಡಾಕೂಟಗಳಿಗೆ ಅಡ್ಡಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್ ಅಧ್ಯಕ್ಷ ವಿನೋದ್, ಶರವಣ್ ಹಾಗೂ ಕರಾಟೆಪಟುಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.