ಸಾಗರ: ನಗರದ ವಿವಿಧ ಬಡಾವಣೆಗಳಲ್ಲಿ ಜಾನುವಾರು ಹತ್ಯೆ ಮಾಡಿ ಸಾಗಣೆ ಮಾಡುತ್ತಿರುವ ಶಂಕೆ ಇದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ಐ.ವಿ.ಹೆಗಡೆ ಒತ್ತಾಯಿಸಿದ್ದಾರೆ.
ನಗರದ ಗಾಂಧಿನಗರ ಬಡಾವಣೆಯ ಅಲ್ಲಲ್ಲಿ ಜಾನುವಾರು ರಕ್ತದ ಕಲೆ ಕಂಡುಬಂದಿರುವ ಕಾರಣ ಭಾನುವಾರ ಪರಿಷತ್ತಿನ ಪ್ರಮುಖರು, ಪೊಲೀಸ್ ಅಧಿಕಾರಿಗಳು, ನಗರಸಭೆ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು.
‘ದುಷ್ಕರ್ಮಿಗಳು ತಡರಾತ್ರಿಯ ವೇಳೆಯಲ್ಲಿ ಜಾನುವಾರುಗಳ ಹತ್ಯೆ ನಡೆಸಿ ಅವುಗಳನ್ನು ಬೇರೆ ಕಡೆ ಸಾಗಿಸುತ್ತಿರುವ ಬಗ್ಗೆ ಅನುಮಾನಗಳಿವೆ. ಹಲವೆಡೆ ಜಾನುವಾರು ರಕ್ತದ ಕಲೆ ಕಾಣಿಸಿಕೊಂಡಿರುವುದು ಇದಕ್ಕೆ ಸಾಕ್ಷಿ
ಯಾಗಿದೆ. ಪೊಲೀಸರು ಈ ರಹಸ್ಯವನ್ನು ಬೇಧಿಸಬೇಕು’ ಎಂದು ಒತ್ತಾಯಿಸಿದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ‘ಜಾನುವಾರು ರಕ್ತದ ಕಲೆ ಕಂಡುಬಂದಿರುವುದನ್ನು ಗಮನಿಸಿದರೆ ಜಾನುವಾರು ಹತ್ಯೆ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಬೀಡಾಡಿ ದನಗಳನ್ನು ಸಂರಕ್ಷಿಸಿ ಗೋಶಾಲೆಗೆ ಕಳು
ಹಿಸಲಾಗುವುದು’ ಎಂದರು.
ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ‘ಜಾನುವಾರು ಹತ್ಯೆ ಹಾಗೂ ಕಳ್ಳತನದ ಪ್ರಕರಣ ನಗರವ್ಯಾಪ್ತಿಯಲ್ಲಿ ಹೆಚ್ಚುತ್ತಿವೆ. ಪೊಲೀಸ್ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.
ನಗರಸಭೆ ಸದಸ್ಯರಾದ ಅರವಿಂದ ರಾಯ್ಕರ್, ಕೆ.ಆರ್. ಗಣೇಶ್ ಪ್ರಸಾದ್, ಸಂತೋಷ್ ಆರ್. ಶೇಟ್, ದೀಪಕ್ ಮರಡೂಮನೆ, ಭಾವನಾ ಸಂತೋಷ್, ಪ್ರಮುಖರಾದ ಸಂತೋಷ್ ಕೆ.ಜಿ., ಕೆ.ಎಚ್. ಸುದರ್ಶನ, ಸಂತೋಷ್ ಶಿವಾಜಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.