ಶಿವಮೊಗ್ಗ: ಸೆ.13 ರಂದು ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿ ಬಾಕಿ ಇದ್ದ ವಿವಿಧ ಸ್ವರೂಪದ ಒಟ್ಟು 1,46,464 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್. ಸಂತೋಷ್ ತಿಳಿಸಿದ್ದಾರೆ.
ಪ್ರಕರಣಗಳ ರಾಜಿ ಮಾಡಿಸಲು ಜಿಲ್ಲೆಯ ಎಲ್ಲಾ ತಾಲ್ಲೂಕು ನ್ಯಾಯಾಲಗಳ ಒಳಗೊಂಡಂತೆ ಒಟ್ಟು 38 ಲೋಕ್ ಅದಾಲತ್ ಪೀಠಗಳ ರಚನೆ ಮಾಡಲಾಗಿದೆ. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಂಜುನಾಥ ನಾಯಕ್ ಮಾರ್ಗದರ್ಶನದಲ್ಲಿ ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಸಲಾಯಿತು ಎಂದು ತಿಳಿಸಿದ್ದಾರೆ.
ಇದರಲ್ಲಿ ವಿವಿಧ ಸ್ವರೂಪದ 14,550 ಹಾಗೂ ವ್ಯಾಜ್ಯ ಪೂರ್ವ 1,13,914 ಪ್ರಕರಣ ಒಳಗೊಂಡಿವೆ. ಜನನ ಪ್ರಮಾಣ ಪತ್ರಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ದಾಖಲೆಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಒಟ್ಟು 81 ಮಕ್ಕಳ ಜನನ ಪ್ರಮಾಣ ಪತ್ರ ಲಭ್ಯವಿರುವುದು ಕಂಡು ಬಂದಿದೆ. ಅವುಗಳನ್ನು ನೇರವಾಗಿ ಪೋಷಕರಿಗೆ ನೀಡಲು ಕ್ರಮವಹಿಸಲಾಗಿದೆ.
ಒಟ್ಟಾರೆ 466 ಮಕ್ಕಳ ಜನನ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಈ ಲೋಕಾ ಅದಾಲತ್ ಸಂದರ್ಭದಲ್ಲಿ ಕಾನೂನು ಸೇವಾ ಸಂಸ್ಥೆಗಳ ಮೂಲಕ ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಲೋಕ್ ಅದಾಲತ್ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು, ಸರ್ಕಾರಿ ವಕೀಲರು, ವಕೀಲದ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, ವಿವಿಧ ವಿಮೆ ಕಂಪನಿ ಹಾಗೂ ಬ್ಯಾಂಕ್ ಅಧಿಕಾರಿಗಳು, ಪ್ಯಾನಲ್ ವಕೀಲರು ಹಾಗೂ ಕಕ್ಷಿದಾರರು ಭಾಗವಹಿಸಿದ್ದರು.
ವಿಚ್ಛೇದನ ಅರ್ಜಿ ಹಿಂಪಡೆದ 16 ಜೋಡಿ
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 16 ದಂಪತಿಗಳು ಲೋಕ್ ಅದಾಲತ್ನ ರಾಜೀ ಸಂಧಾನದ ವೇಳೆ ತಮ್ಮ ಪ್ರಕರಣ ಹಿಂಪಡೆದು ಒಟ್ಟಾಗಿ ಜೀವನ ನಡೆಸಲು ನಿರ್ಧರಿಸಿದ್ದಾರೆ. 10 ವರ್ಷಕ್ಕಿಂತ ಹಳೆಯ ಆರು ಐದು ವರ್ಷಕ್ಕಿಂತ ಹಳೆಯ 49 ಹಾಗೂ ಹಿರಿಯ ನಾಗರಿಕರಿಗೆ ಸಂಬಂಧಿಸಿದ ಒಟ್ಟು 31 ಪ್ರಕರಣ ರಾಜಿ ಸಂಧಾನದಿಂದ ಇತ್ಯರ್ಥಗೊಂಡಿವೆ ಎಂದು ನ್ಯಾಯಾಧೀಶ ಸಂತೋಷ್ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.