ಶಿವಮೊಗ್ಗ: ಆದಿಕರ್ನಾಟಕ (ಎಕೆ)-ಆದಿದ್ರಾವಿಡ (ಎಡಿ) ಜಾತಿಯವರು ಜನಗಣತಿ ಅಥವಾ ಜಾತಿಗಣತಿಗೆ ಅಧಿಕಾರಿಗಳು ಬಂದಾಗ ತಮ್ಮ ಮೂಲಜಾತಿಯನ್ನು ಹೇಳಬೇಕು ಎಂದು ಮಾದಿಗ ದಂಡೋರ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಎಂ.ಶಂಕರಪ್ಪ ಹೇಳಿದರು.
‘ಸಮುದಾಯದವರಿಗೆ ಮಾಹಿತಿಯ ಕೊರತೆ ಇದೆ. ಎಕೆ, ಎಡಿ ಎಂಬುವುದು ಜಾತಿಯೇ ಅಲ್ಲ. ಹೀಗೆ ಬರೆಸುವುದರಿಂದ ಮೂಲ ಜಾತಿಯ ನಮೂದು ಇಲ್ಲದೇ ಕೆಲವೊಂದು ಸಮಸ್ಯೆಗಳು ಉದ್ಭವಿಸುತ್ತದೆ. ಇನ್ನು ಮುಂದೆ, ಎ.ಕೆ, ಎ.ಡಿ. ಎಂದು ಪ್ರಮಾಣ ಪತ್ರ ಬರೆಸಿದವರು ಕೂಡ ತಮ್ಮ ಮೂಲಜಾತಿಯನ್ನು ನಮೂದಿಸಬೇಕು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ವರದಿ ಆಧರಿಸಿ ಮೇ1 ರಿಂದ ಅಂದಾಜು 30 ಸಾವಿರ ಸ್ವಯಂ ಸೇವಕರು ಜಾತಿವಾರು ಜನಗಣತಿಗೆ ಮನೆ ಬಾಗಿಲಿಗೆ ಬರಲಿದ್ದಾರೆ. ಆದ್ದರಿಂದ, ಈ ವಿಚಾರವನ್ನು ಅಗತ್ಯವಾಗಿ ತಿಳಿಸಿ. ದತ್ತಾಂಶಗಳ ಪ್ರಕಾರ ರಾಜ್ಯದಲ್ಲಿ ಎಕೆ, ಎಡಿಗೆ ಸೇರಿದ 48 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. 8 ಲಕ್ಷ ಮಾದಿಗರು, 6 ಲಕ್ಷ ಹೊಲೆಯರು ಇದ್ದಾರೆ. ಆದ್ದರಿಂದ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ (ಎಕೆ,ಎಡಿ) ಎಂದು ಬರೆಸಿದವರು ಮಾದಿಗ ಅಥವಾ ಹೊಲೆಯರು ಎಂದು ಮೂಲ ಜಾತಿಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಇದರಿಂದ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ’ ಎಂದು ಹೇಳಿದರು.
ಪ್ರಮುಖರಾದ ಸಿ.ಮೂರ್ತಿ, ಮುನಿರಾಜು, ವೆಂಕಟೇಶ್, ಶಿವಾಜಿ, ಕೆಂಪಮ್ಮ, ಪ್ರಭು, ಮಂಜಣ್ಣ, ರಶ್ಮಿ, ಗಂಗಾಧರ್, ವೆಂಕಟೇಶ್, ಶೇಖರಪ್ಪ, ಶಿವಾಜಿ, ತೇಜ, ನಾಗರಾಜು, ಮಲ್ಲಪ್ಪ, ಕರಿಬಸಪ್ಪ, ಶ್ರೀಧರ್, ಪರಮೇಶ್ವರಪ್ಪ, ಸುನೀತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.