ಹೊಳೆಹೊನ್ನೂರು: ಕೃಷಿ ಮಾಡಲು ಜಮೀನು ಇಲ್ಲ ಎಂದು ಕೊರಗುವವರಿಗೆ ಇಲ್ಲೊಬ್ಬರು ನಿದರ್ಶನವಾಗುತ್ತಾರೆ. ಸ್ವಂತ ಜಮೀನು ಇಲ್ಲದಿದ್ದರೂ ಬೇರೆಯವರ ಜಮೀನಿನಲ್ಲಿ ಕೃಷಿ ಮಾಡಿ ಆದಾಯಗಳಿಸುತ್ತಿದ್ದಾರೆ. ಶ್ರೀನಿವಾಸಪುರ ಗ್ರಾಮದ ಮಲ್ಲೇಶ್. ದುಡಿಮೆ ಯಾವತ್ತೂ ಕೈಬಿಡುವುದಿಲ್ಲ ಎನ್ನುವುದಕ್ಕೆ ಇಲ್ಲೊಬ್ಬರು ಸಾಕ್ಷಿಯಾಗಿದ್ದಾರೆ.
ಮಲ್ಲೇಶ್ ಅವರದು ಕಡು ಬಡತನದ ಕುಟುಂಬ. ಮೂರು ಹೊತ್ತಿನ ಊಟಕ್ಕೋಸ್ಕರ ದಿನನಿತ್ಯ ಕೂಲಿ-ನಾಲಿ ಮಾಡಿ ಜೀವನ ನಡೆಸುತ್ತಿದ್ದರು. ದುಡಿದ ಹಣ ಕುಟುಂಬದ ಖರ್ಚಿಗೆ ಸಾಕಾಗುತ್ತಿತ್ತು. ಹೀಗಿರುವಾಗ ಮಾಲೀಕರೊಬ್ಬರು ತಮ್ಮ ಅಡಿಕೆ ತೋಟದ ನಿರ್ವಹಣೆಯನ್ನು ಮಲ್ಲೇಶ್ಅವರಿಗೆ ವಹಿಸಿದರು. ಅದರಲ್ಲಿ ಒಂದು ಎಕರೆ ಜಮೀನಿನಲ್ಲೇಗುಲಾಬಿ ಹೂ ಬೆಳೆಯಲು ಆರಂಭಿಸಿದರು.
ಯಾವುದೇ ಆದಾಯ ಇಲ್ಲದಿದ್ದರೂ ಕೂಲಿಯಿಂದ ಬಂದ ಹಣವನ್ನೇ ಗೊಬ್ಬರ, ಸ್ವಚ್ಛತೆ ಹಾಗೂ ಆರೈಕೆಗೆ ಬಳಸಿದರು. ಬಂದ ಆದಾಯವೆನ್ನಲ್ಲ ಆ ಹೂವಿನ ತೋಟಕ್ಕೆ ವಿನಿಯೋಗಿಸಿ ಗಿಡಗಳನ್ನು ಚೆನ್ನಾಗಿ ಬೆಳೆಸಿದರು.
ಹೂವು ಈಗ ಕಟಾವಿಗೆ ಬಂದಿದ್ದು, ಪ್ರತಿದಿನ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಮನೆಯ ಸದಸ್ಯರು ಕಟಾವು ಮಾಡುತ್ತಿದ್ದಾರೆ. ಯಾವುದೇ ಶುಭ ಸಮಾರಂಭಗಳಿಗೂ ಹೋಗದೇ ಶ್ರಮವಹಿಸಿಕೆಲಸ ಮಾಡುತ್ತಿದ್ದಾರೆ. ವರ್ಷಕ್ಕೆ
₹ 8ಲಕ್ಷದಿಂದ ₹10 ಲಕ್ಷದವರೆಗೂ ಹಣ ಸಿಗುತ್ತಿದೆ. ಖರ್ಚು ಕಳೆದು₹ 3ಲಕ್ಷದಿಂದ ₹ 4 ಲಕ್ಷದವೆರೆಗೂ ಲಾಭ ಸಿಗುತ್ತಿದೆ. ಹೂವಿನ ದರ ಏರಿಕೆಯಾದಾಗ ₹ 5 ಲಕ್ಷದಿಂದ₹6 ಲಕ್ಷದವರೆಗೂ ಉಳಿತಾಯವಾಗುತ್ತದೆ.
ಆರಂಭದಲ್ಲಿ ಜಮೀನು ಇಲ್ಲದ ಮಲ್ಲೇಶ್ ಅವರು ಹೂವಿನಲ್ಲಿ ಬಂದ ಆದಾಯವನ್ನು ಕೂಡಿಟ್ಟು ಒಂದೂವರೆ ಎಕರೆ ಜಮೀನನ್ನು ಖರೀದಿ ಮಾಡಿದ್ದಾರೆ. ಇಬ್ಬರು ಅಕ್ಕಂದಿರ ಮದುವೆ ಮಾಡಿ, ಮನೆಯನ್ನು ನಿರ್ಮಿಸಿ ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಅಲ್ಲದೇ ಇಂದಿಗೂ ಅವರು ಬೇರೆಯವರ ತೋಟದಲ್ಲಿ ಹೂವನ್ನು ಬೆಳೆಸಿ ಪ್ರತಿ ನಿತ್ಯ ಕಟಾವು ಮಾಡಿ ಮಾರಾಟ ಮಾಡುತ್ತಿದ್ದಾರೆ.
ಮಲ್ಲೇಶ್ ಅವರಿಗೆ ಸಹಾಯಕರಾಗಿ ತಂದೆ ಬಸಪ್ಪ, ತಾಯಿ ಶಾರದಮ್ಮ ಹಾಗೂ ಸಹೋದರ ಪರಶುರಾಮ್ ಹಗಲು-ರಾತ್ರಿಯೆನ್ನದೇ ದುಡಿಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.