ADVERTISEMENT

ಶಿಕಾರಿಪುರ: ಪುರಸಭೆ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 5:50 IST
Last Updated 1 ಡಿಸೆಂಬರ್ 2022, 5:50 IST
ಶಿಕಾರಿಪುರದ ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಪುರಸಭೆ ಸದಸ್ಯರು ಚರ್ಚೆ ನಡೆಸಿದರು.
ಶಿಕಾರಿಪುರದ ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಪುರಸಭೆ ಸದಸ್ಯರು ಚರ್ಚೆ ನಡೆಸಿದರು.   

ಶಿಕಾರಿಪುರ: ವಿರೋಧ ಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಸದಸ್ಯರು ಬುಧವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯ ಎಸ್.ಪಿ.ನಾಗರಾಜಗೌಡ, ‘ಪುರಸಭೆ ಸಾಮಾನ್ಯ ಸಭೆ ಅಜೆಂಡಾ ತಯಾರಿಸುವಾಗ ಹಾಗೂ ಕೆಲವು ಅಭಿವೃದ್ಧಿ ಕಾರ್ಯಗಳಿಗೆ ತಿರ್ಮಾನ ಕೈಗೊಳ್ಳುವ ಸಂದರ್ಭದಲ್ಲಿ ವಿರೋಧ ಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ‘ಈ ರೀತಿ ತಾರತಮ್ಯ ನೀತಿಯನ್ನು ಆಡಳಿತ ಪಕ್ಷ ಮಾಡಬಾರದು’ ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸದಸ್ಯ ಹುಲ್ಮಾರ್ ಮಹೇಶ್, ‘ಶಾಶ್ವತ ರಾಷ್ಟ್ರ ಧ್ವಜ ಸ್ತಂಭ ನಿರ್ಮಿಸಲು ಸ್ಥಳ ಗುರುತಿಸುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು’ ಎಂದರು.

ADVERTISEMENT

ಬಿಜೆಪಿ ಸದಸ್ಯೆ ರೂಪಕಲಾ ಹೆಗಡೆ, ‘ಉತ್ತಮ ಸ್ಥಳದಲ್ಲಿ ಧ್ವಜ ಸ್ತಂಭ ನಿರ್ಮಿಸಬೇಕು. ಪಟ್ಟಣದಲ್ಲಿರುವ ಸಂಘ ಸಂಸ್ಥೆಗಳ ಜತೆ ಚರ್ಚಿಸಿ ಸ್ಥಳ ನಿಗದಿ ಮಾಡೋಣ’ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಸದಸ್ಯ ಟಿ.ಎಸ್.ಮೋಹನ್, ‘ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ವರ್ಷ ಕಳೆದರೂ ಹರಾಜು ಪ್ರಕ್ರಿಯೆ ನಡೆಸಿಲ್ಲ. ಶೀಘ್ರ ಪುರಸಭೆ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ನೀಡಲು ಹರಾಜು ಪ್ರಕ್ರಿಯೆ ನಡೆಸಬೇಕು. ವಾಣಿಜ್ಯ ಮಳಿಗೆ ನಿರ್ಮಿಸಿದ ಕೆಲವು ವಾಣಿಜ್ಯ ಸಂಕೀರ್ಣದಲ್ಲಿ ಸಮರ್ಪಕ ಶೌಚಾಲಯ ವ್ಯವಸ್ಥೆ ಇಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದರು.

‘ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಬೀದಿ ನಾಯಿ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಯುಜಿಡಿ ಕಾಮಗಾರಿ ಪೂರ್ಣಗೊಳಿಸಬೇಕು. ಮನೆಗಳಿಗೆ ಛೇಂಬರ್ ನಿರ್ಮಿಸಿ ಸಮರ್ಪಕವಾಗಿ ಸಂಪರ್ಕ ನೀಡಬೇಕು’ ಎಂದುಸರ್ವ ಸದಸ್ಯರು ಒತ್ತಾಯಿಸಿದರು.

ಪುರಸಭೆ ಮುಖ್ಯಾಧಿಕಾರಿ ಭರತ್, ನಾಯಿ ಹಾವಳಿ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ರೇಖಾಬಾಯಿ ಮಂಜುನಾಥ್ ಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯರಾದ ಗುರುರಾಜ್ ರಾವ್ ಜಗತಾಪ್, ಭದ್ರಾಪುರ ಫಾಲಾಕ್ಷ, ಲಕ್ಷ್ಮಿ ಮಹಾಲಿಂಗಪ್ಪ, ಬೆಣ್ಣೆ ದೇವೇಂದ್ರಪ್ಪ, ರೂಪಕಲಾ ಎಸ್. ಹೆಗಡೆ, ಜೀನಳ್ಳಿ ಪ್ರಶಾಂತ್, ಸುರೇಶ್, ರೋಷನ್, ಶ್ವೇತಾ ರವೀಂದ್ರ, ಶಕುಂತಲಾ ಶಿವಪ್ಪ, ಕಮಲಮ್ಮ ಹುಲ್ಮಾರ್, ರೂಪಾ ಮಂಜುನಾಥ್, ಉಳ್ಳಿ ದರ್ಶನ್, ಸುನಂದಾ ಮಂಜುನಾಥ್, ವಿಶ್ವನಾಥ್, ಫೈರೋಜಾಬಾನು, ರಮೇಶ್, ಜಯಶ್ರೀ, ಉಮಾವತಿ, ಆರೋಗ್ಯ ನಿರೀಕ್ಷಕ ರಾಜಕುಮಾರ್, ಆರ್‌ಒ ಪರಶುರಾಮ್, ಎಂಜಿನಿಯರ್ ಲೋಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.