ಶಿವಮೊಗ್ಗ: ‘ಮಾರ್ಟ್ ಮಿಸ್ ಐಕಾನ್ ಇಂಡಿಯಾ’ ವತಿಯಿಂದ ನಡೆದ ಸ್ಪರ್ಧೆಯಲ್ಲಿ ನಗರದ ಅಮೃತಾ ಪವಾರ್ ಅವರು ‘ಮಿಸ್ ಕರ್ನಾಟಕ’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಇವರು ವಿನೋಬನಗರದ ಸಹಾಯಕ ಎಂಜಿನಿಯರ್ ಆಗಿರುವ ಸೂರ್ಯನಾರಾಯಣ್ ಪವಾರ್ ಹಾಗೂ ರಶ್ಮಿ ಪವಾರ್ ಅವರ ಪುತ್ರಿ. ಚಿಕ್ಕ ವಯಸ್ಸಿನಲ್ಲಿಯೇ ಶಾಲೆ ಮತ್ತು ಕಾಲೇಜು ದಿನಗಳಲ್ಲಿ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ, ಬಹುಮಾನ ಪಡೆಯುತ್ತಿದ್ದರು. ಸ್ಥಳೀಯ, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲೂ ಕೂಡ ಅನೇಕ ಬಹುಮಾನಗಳನ್ನು, ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಅಮೃತಾ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಾಡೆಲಿಂಗ್ ನನ್ನ ಹವ್ಯಾಸವಾಗಿದ್ದು, ಇದು ನನ್ನನ್ನು ‘ಮಿಸ್ ಕರ್ನಾಟಕ’ದವರೆಗೂ ಕರೆದು ತಂದಿದೆ ಎಂದು ಹೇಳಿದರು.
‘2020ರ ಮಾರ್ಚ್ 1ರಂದು ಅಂತಿಮ ಸ್ಪರ್ಧೆ ನಡೆಯಿತು. ಪರಿಶ್ರಮ, ಒಂದಿಷ್ಟು ಸಾಧನೆ, ಸ್ಫೂರ್ತಿ, ಸಹಕಾರ ಇವೆಲ್ಲವೂ ಇದ್ದರೆ ಏನಾದರೂ ಸಾಧಿಸಬಹುದು ಎಂದ ಸತ್ಯವನ್ನು ನಾನು ತಿಳಿದುಕೊಂಡೆ’ ಎಂದರು.
‘ನನ್ನ ಮುಂದಿನ ಗುರಿ ಸಿನಿಮಾ ಕ್ಷೇತ್ರಕ್ಕೆ ಸೇರುವುದು. ಇದರ ಜತೆಗೆ ಸಮಾಜದ ಬಡವರಿಗೆ, ವೃದ್ಧರಿಗೆ, ಅಂಗವಿಕಲರಿಗೆ ನನ್ನ ಕೈಲಾದ ಸಹಾಯ ಮಾಡುವುದು. ವಿದ್ಯಾಭ್ಯಾಸ ಕೂಡ ಮುಂದುವರಿಸುತ್ತೇನೆ’ ಎಂದು ತಿಳಿಸಿದರು.
ತಾಯಿ ರಶ್ಮಿ ಪವಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.