ADVERTISEMENT

ಶಿವಮೊಗ್ಗ | ಬೈಕ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿನಿ ಕರೆ ತಂದಿದ್ದಕ್ಕೆ ಹಲ್ಲೆ

ಭದ್ರಾವತಿಯಲ್ಲಿ ಮತೀಯ ಗೂಂಡಾಗಿರಿ

​ಪ್ರಜಾವಾಣಿ ವಾರ್ತೆ
Published 28 ಮೇ 2023, 16:31 IST
Last Updated 28 ಮೇ 2023, 16:31 IST
ಅ‘ನೈತಿಕ’ ಪೊಲೀಸ್‌ಗಿರಿ (ಪ್ರಾತಿನಿಧಿಕ ಚಿತ್ರ)
ಅ‘ನೈತಿಕ’ ಪೊಲೀಸ್‌ಗಿರಿ (ಪ್ರಾತಿನಿಧಿಕ ಚಿತ್ರ)   

ಶಿವಮೊಗ್ಗ: ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಬಂದ ಕಾರಣಕ್ಕೆ ಪ್ಯಾರಾ ಮೆಡಿಕಲ್ ಕಾಲೇಜಿನ ಮೂವರು ಹಿಂದೂ ವಿದ್ಯಾರ್ಥಿಗಳ ಮೇಲೆ ಭದ್ರಾವತಿಯಲ್ಲಿ ಶುಕ್ರವಾರ ಗುಂಪೊಂದು ಹಲ್ಲೆ ನಡೆಸಿದೆ.

ಭದ್ರಾವತಿಯ ವಿಶ್ವೇಶ್ವರಯ್ಯ ನಗರದ ಹಿಂದೂ ವಿದ್ಯಾರ್ಥಿ ಹಾಗೂ ಖಲಂದರ್ ನಗರದ ಮುಸ್ಲಿಂ ವಿದ್ಯಾರ್ಥಿನಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಸಹಪಾಠಿಗಳು. ವಿದ್ಯಾರ್ಥಿನಿಯ ಅಕ್ಕನಿಗೆ ಅಪಘಾತವಾಗಿರುವ ಬಗ್ಗೆ ಕಾಲೇಜಿನಲ್ಲಿದ್ದ ವೇಳೆ ಮಾಹಿತಿ ಲಭಿಸಿದೆ.

ಹೀಗಾಗಿ ವಿದ್ಯಾರ್ಥಿಯು ತನ್ನ ಸ್ನೇಹಿತರಿಂದ ಬೈಕ್ ಪಡೆದು ಆಕೆಯನ್ನು ಖಲಂದರ್ ನಗರದ ಮನೆಗೆ ಕರೆದುಕೊಂಡು ಬಂದಿದ್ದ. ವಾಪಸ್ ತೆರಳುವಾಗ ಅಲ್ಲಿನ ಝೆಂಡಾ ಕಟ್ಟೆಯ ಬಳಿ ಗುಂ‍ಪೊಂದು ವಿದ್ಯಾರ್ಥಿಯನ್ನು ಅಡ್ಡಗಟ್ಟಿದೆ. ಆತನ ಹೆಸರು ಕೇಳಿದ ಗುಂಪು, ‘ನಮ್ಮ ಸಮುದಾಯದ ಹುಡುಗಿಯನ್ನು ಏಕೆ ಬೈಕ್‌ನಲ್ಲಿ ಕೂರಿಸಿಕೊಂಡು ಬಂದೆ’ ಎಂದು ಪ್ರಶ್ನಿಸಿ ಹಲ್ಲೆ ಮಾಡಿದೆ.

ADVERTISEMENT

ಈ ವಿಷಯ ತಿಳಿದು ಸ್ಥಳಕ್ಕೆ ಬಂದ ವಿದ್ಯಾರ್ಥಿಯ ಇಬ್ಬರು ಸ್ನೇಹಿತರ ಮೇಲೂ ಹಲ್ಲೆ ಮಾಡಲಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಮಿಜಾನ್‌ಖಾನ್ ಎಂಬುವರು ಜಗಳ ಬಿಡಿಸಿ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಈ ಬಗ್ಗೆ ಭದ್ರಾವತಿಯ ಹಳೆನಗರ ಪೊಲೀಸ್ ಠಾಣೆಗೆ ವಿದ್ಯಾರ್ಥಿಯು ಭಾನುವಾರ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.