ADVERTISEMENT

ಸಿದ್ದರಾಮಯ್ಯಗೆ ಮುಸ್ಲಿಮರೇ ಗತಿ; ಜಮೀರ್‌ ಕಾಲು ಹಿಡಿಯಬೇಕು -ಸಚಿವ ಈಶ್ವರಪ್ಪ

ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 14:15 IST
Last Updated 5 ಡಿಸೆಂಬರ್ 2021, 14:15 IST
ಕೆ.ಎಸ್‌. ಈಶ್ವರಪ್ಪ
ಕೆ.ಎಸ್‌. ಈಶ್ವರಪ್ಪ   

ಶಿವಮೊಗ್ಗ: ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಪರ್ಧಿಸುವುದಿಲ್ಲ. ಅವರಿಗೆ ಮುಸ್ಲಿಮರೇ ಗತಿ. ಜಮೀರ್‌ ಅಹ್ಮದ್‌ಖಾನ್‌ ಕಾಲು ಹಿಡಿದುಕೊಂಡು ಚಾಮರಾಜಪೇಟೆಯಲ್ಲಿ ಸ್ಪರ್ಧಿಸುತ್ತಾರೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನ ಪರಿಷತ್ ಚುನಾವಣೆ ನಂತರ ಕಾಂಗ್ರೆಸ್‌ನಲ್ಲಿ ಅಲ್ಲೋಲ–ಕಲ್ಲೋಲ ಆಗುತ್ತದೆ’ ಎಂದು ಭವಿಷ್ಯ ನುಡಿದರು.

‘ನಾನು ಏನಾದರೂ ಹೇಳುತ್ತೇನೆ. ಅದಕ್ಕೂ ಅವರಿಗೂ ಸಂಬಂಧವಿಲ್ಲ. ಅದನ್ನು ಕೇಳೋಕೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಯಾರು’ ಎಂದು ಈಶ್ವರಪ್ಪ ಅವರು ತಮ್ಮನ್ನು ಟೀಕಿಸಿದ ಕಾಂಗ್ರೆಸ್‌ ನಾಯಕರ ವಿರುದ್ಧ ಹರಿಹಾಯ್ದರು.

ADVERTISEMENT

‘ನಾನು ಎಂದೂ ಹಿಂದುಳಿದವರ ನಾಯಕನಾಗಲು ಹೊರಟಿಲ್ಲ. ನಾನು ಕುರುಬ ನಾಯಕನಾಗಲು ಹೋಗ್ತಿನಿ ಎಂದು ಸಿದ್ದರಾಮಯ್ಯ ಏಕೆ ಹೇಳಬೇಕು’ ಎಂದು ಪ್ರಶ್ನಿಸಿದರು.

‘ಡಿ.ಕೆ. ಶಿವಕುಮಾರ್‌ ಅವರು ಜೈಲಿಗೆ ಹೋಗಿದ್ದಾಗ ಅವರ ತಾಯಿ ಕಣ್ಣೀರು ಹಾಕಿದ್ದರು. ಈಗ ಅವರ ಶಾಪ ಯಾರಿಗೆ ತಟ್ಟುತ್ತದೆ? ತಾಯಿಗೆ ಕಣ್ಣೀರು ಹಾಕಿಸಿದ್ದು ಯಾರ ತಪ್ಪು? ರಾಜ್ಯದ ಜನರಿಗೆ ಡಿ.ಕೆ.ಶಿವಕುಮಾರ್ ಉತ್ತರ ನೀಡಬೇಕು. ಅವರು ಬಂಡೆಯಲ್ಲಿ ಎಷ್ಟು ದುಡ್ಡು ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ’ ಎಂದು ಈಶ್ವರಪ್ಪ ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.