ಭದ್ರಾವತಿಯ ಎಂಪಿಎಂ ನಿವೃತ್ತ ಕಾರ್ಮಿಕರು ಉಪ ತಹಶೀಲ್ದಾರ್ ಮಂಜನಾಯ್ಕ ಅವರಿಗೆ ಮನವಿ ಸಲ್ಲಿಸಿದರು
ಭದ್ರಾವತಿ: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ಕಾರ್ಮಿಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸದೇ ನಿರ್ಲಕ್ಷ್ಯ ವಹಿಸಿರುವ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ವತಿಯಿಂದ ಬುಧವಾರ ದೂರು ನೀಡಲಾಯಿತು.
ನಿವೃತ್ತ ಕಾರ್ಮಿಕರಿಗೆ ಬರಬೇಕಾದ ಬಾಕಿ ಹಣ ನೀಡದೇ ವಂಚಿಸಲಾಗುತ್ತಿದೆ. 2012ರ ವೇತನ ಒಪ್ಪಂದಕ್ಕಾಗಿ ನೀಡಿದ್ದ ₹55 ಕೋಟಿಯನ್ನು ಕಾರ್ಮಿಕರಿಗೆ ಪಾವತಿಸದ ಕಾರಣ, ನ್ಯಾಯಾಲಯಗಳಿಗೆ ಅಲೆದಾಡುವಂತಾಗಿದೆ ಎಂದು ನಿವೃತ್ತ ಕಾರ್ಮಿಕರು ಅಳಲು ತೋಟಿಕೊಂಡರು.
ಎಂ.ಪಿ.ಎಂ. ಕಂಪನಿ 2016ರಿಂದ ಉತ್ಪಾದನೆ ನಿಲ್ಲಿಸಿ 2021ರಲ್ಲಿ ಮುಚ್ಚಿತ್ತು. 3 ವರ್ಷ ಕಳೆದರೂ ಕೆಲವರು ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಅಧಿಕಾರ ಅನುಭವಿಸುತ್ತಿದ್ದಾರೆ. 60 ವರ್ಷ ಮೇಲ್ಪಟ್ಟವರು ಮತ್ತು ಸ್ವಯಂ ನಿವೃತ್ತಿ ಹೊಂದಿದವರನ್ನು ಸರ್ಕಾರದ ಕಂಪನಿಗಳಲ್ಲಿ ಮತ್ತೆ ಮರುನೇಮಕ ಮಾಡಿಕೊಳ್ಳುವಂತಿಲ್ಲ ಎಂಬ ಕಾನೂನು ಇದ್ದರೂ ಈ ಕಂಪನಿಯಲ್ಲಿ ಕೆಲವರು ಯಾವುದೇ ನೇಮಕಾತಿ ಆದೇಶ, ಸಂದರ್ಶನ ಪ್ರಕ್ರಿಯೆ ಇಲ್ಲದೆ ಹಿಂಬಾಗಿಲಿಂದ ಕೆಲಸಕ್ಕೆ ಸೇರಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕಾರ್ಖಾನೆ ಪುನರಾರಂಭಗೊಂಡಲ್ಲಿ ಸಾವಿರಾರು ಮಂದಿಗೆ ಉದ್ಯೋಗ ಲಭಿಸಲಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಕಾರ್ಖಾನೆ ಆರಂಭಿಸಬೇಕೆಂದು ಮನವಿ ಮಾಡಿದರು.
ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯ, ಸಂಚಾಲಕರಾದ ವಿ. ಗೋವಿಂದಪ್ಪ, ಕೆ.ಜಿ ವೆಂಕಟೇಶ್ ಮೂರ್ತಿ, ಎನ್. ರಘುನಾಥರಾವ್, ಶಿವಲಿಂಗಯ್ಯ ಮತ್ತು ಆರ್. ಬಾಪು ಉಪಸ್ಥಿತರಿದ್ದರು. ನೂರಾರು ನಿವೃತ್ತ ಕಾರ್ಮಿಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ನಂತರ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ, ಉಪ ತಹಶೀಲ್ದಾರ್ ಮಂಜಾನಾಯ್ಕ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್. ರವಿಕುಮಾರ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ತೀರ್ಥೇಶ ಸೇರಿ ಇತರರು ಬೆಂಬಲ ಸೂಚಿಸಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.