ಶಿವಮೊಗ್ಗ: ಸನಾತನ ಹಿಂದೂ ಪರಿಷತ್ ಚುನಾವಣಾ ಸಮಯದಲ್ಲಿ ಹಮ್ಮಿಕೊಂಡಿರುವ ಕನಕದಾಸರ ಜಯಂತಿ ಮಹೋತ್ಸವಕ್ಕೆ ಮಲೆನಾಡು ಯುವ ಕುರುಬರ ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ.
ಶಿವಮೊಗ್ಗ ನಗರದಲ್ಲಿ ನ.27ರಂದು ಸನಾತನ ಹಿಂದೂ ಸಮಾಜ ಪರಿಷತ್ ಪೂಜ್ಯ ಭಾರತ ಕಾರ್ಯಕ್ರಮದಡಿ ‘ಕನಕದಾಸ ಜಯಂತಿ ಮಹೋತ್ಸವ’ ಹಮ್ಮಿಕೊಂಡಿದೆ. ಇದು ಸ್ವಾಗತಾರ್ಹ. ಆದರೆ, ವಿಧಾನಪರಿಷತ್ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಈ ಸಮಯದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್. ಅರುಣ್ ಅವರ ಸಂಚಾಲಕತ್ವದಲ್ಲಿ ನಡೆಸುತ್ತಿರುವುದು ಎಷ್ಟು ಸರಿ? ಇದುವರೆಗೂ ನೆನಪಾಗದ ಕನಕದಾಸರು ಚುನಾವಣಾ ಸಮಯದಲ್ಲೇ ಏಕೆ ನೆನಪಾದರು ಎಂದು ವೇದಿಕೆಯ ಅಧ್ಯಕ್ಷ ಸೋಮು, ಪ್ರಧಾನ ಕಾರ್ಯದರ್ಶಿ ಸಿ.ಜಿ. ಮಧುಸೂದನ್ ಪ್ರಶ್ನಿಸಿದ್ದಾರೆ.
ಕನಕದಾಸರ ಜಯಂತಿಯ ಹೆಸರಿನಲ್ಲಿ ಪರಿಷತ್ ಚುನಾವಣಾ ಅಭ್ಯರ್ಥಿ ಪರ ಮತಯಾಚನೆ ಮಾಡುವ ಉದ್ದೇಶ ಅಡಗಿದೆ. ಸನಾತನ ಹಿಂದೂ ಪರಿಷತ್ ಸ್ವಾರ್ಥಕ್ಕಾಗಿ ಕನಕದಾಸರ ಹೆಸರು ಬಳಸಿಕೊಳ್ಳುತ್ತಿದೆ. ಕಾರ್ಯಕ್ರಮಕ್ಕೆ ವಿವಿಧ ಸಮುದಾಯಗಳ ಮಠಾಧೀಶರನ್ನು ಆಹ್ವಾನಿಸಿದೆ. ಆದರೆ, ಇದೇ ಸಮುದಾಯಕ್ಕೆ ಸೇರಿರುವ ಕುರುಬ ಸಮುದಾಯದ ಮುಖಂಡರಾದ ಆರ್. ಪ್ರಸನ್ನಕುಮಾರ್ ಅವರನ್ನು ಆಹ್ವಾನಿಸಿಲ್ಲ. ಒಂದು ಪಕ್ಷದ ಅಭ್ಯರ್ಥಿಯನ್ನು ಆಹ್ವಾನಿಸಿ, ಮತ್ತೊಂದು ಪಕ್ಷದ ಅಭ್ಯರ್ಥಿಯನ್ನು ಕಡೆಗಣಿಸುವ ಉದ್ದಶದಲ್ಲೇ ಅವರ ಹುನ್ನಾರ ತಿಳಿಯುತ್ತದೆ. ತಕ್ಷಣ ಕಾರ್ಯಕ್ರಮ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.