ಶಿವಮೊಗ್ಗ: ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಧಮಕಿ ಹಾಕುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಬಣ) ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
‘ಹಂಸಲೇಖ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ದಲಿತರ ಮನೆಗೆ ಬಲಿತರು ಬಂದು ಅಸ್ಪೃಶ್ಯತೆ ಹೋಗಲಾಡಿಸುತ್ತೇವೆ ಎಂದು ಹೇಳುವ ಬದಲು, ಬಲಿತರು ತಮ್ಮ ಮನೆಗೆ ದಲಿತರನ್ನು ಕರೆತಂದು ಊಟ ಬಡಿಸಿ, ಅವರ ತಟ್ಟೆ, ಲೋಟ ತೊಳೆದು ತಮ್ಮ ತಪ್ಪು ತಿದ್ದಿಕೊಳ್ಳಬೇಕು ಎಂದು ಹೇಳಿದ್ದರಲ್ಲಿ ಯಾವ ತಪ್ಪೂ ಇರಲಿಲ್ಲ. ಆದರೆ, ಕೆಲ ಮನುವಾದಿಗಳು ಗಾಸಿಗೊಂಡಿದ್ದು, ಹಂಸಲೇಖ ಅವರು ಹಿಂದೂಗಳ ಕ್ಷಮೆ ಯಾಚಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಧಮಕಿ ಹಾಕಿದ್ದರಿಂದ ಹಂಸಲೇಖ ಕ್ಷಮೆ ಕೋರಿದ್ದಾರೆ. ಇದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ನಮ್ಮನ್ನು ಸಾಂಸ್ಕೃತಿಕ ಗುಲಾಮಗಿರಿಯಿಂದ ಹೊರತಂದಿದೆ. ನಮ್ಮ ಪ್ರಜಾಪ್ರಭುತ್ವ ಧರ್ಮಾಕ್ರಸಿ ಆಗುತ್ತದೆ ಎನ್ನುವ ಆತಂಕ ಜನಸಾಮಾನ್ಯರಲ್ಲಿದೆ. ಶೇ 15ರಷ್ಟು ಇರುವ ಮನುವಾದಿಗಳು ಶೇ 85ರಷ್ಟು ಇರುವ ದಲಿತರು ಮತ್ತು ಹಿಂದುಳಿದವರ ಸ್ವಾಭಿಮಾನ ಕೆಣಕುತ್ತಿದ್ದು, ಇದೇ ಧೋರಣೆ ಮುಂದುವರಿದರೆ ಪ್ರತಿರೋಧ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಡಿಎಸ್ಎಸ್ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಶಿವಬಸಪ್ಪ, ಎ. ಅರ್ಜುನ್, ಎಂ. ಏಳುಕೋಟಿ, ರಾಘವೇಂದ್ರ ಜೋಗಿಹಳ್ಳಿ, ಅತ್ತಿಗುಂದ ಕರಿಯಪ್ಪ, ಎಂ. ರವಿ ಹರಿಗೆ, ಎಂ. ರಮೇಶ್ ಚಿಕ್ಕಮರಡಿ, ಹನುಮಂತಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.