ಶಿವಮೊಗ್ಗ: ಪವಿತ್ರವಸ್ತ್ರ ಅಭಿಯಾನಕ್ಕೆ ಸರ್ಕಾರ ಬಿಡುಗಡೆ ಮಾಡಿದ್ದ ₹ 33 ಲಕ್ಷ ಅನುದಾನವನ್ನು ಸಾಗರ ತಾಲ್ಲೂಕಿನ ಭೀಮನಕೋಣೆಯ ಚರಕ ಸಂಸ್ಥೆ ತಿರಸ್ಕರಿಸಿದೆ.
‘ಮೂರು ವರ್ಷಗಳ ಹಿಂದೆ ಬಿಡುಗಡೆಯಾದ ಅನುದಾನವನ್ನು ನೀಡಲು ಕೈಮಗ್ಗ ಹಾಗೂ ಜವಳಿ ಇಲಾಖೆಯ ಅಧಿಕಾರಿಗಳು ಸತಾಯಿಸುತ್ತಿರುವ ಧೋರಣೆ ಖಂಡಿಸಿ ಪ್ರತಿಭಟನಾತ್ಮಕವಾಗಿ ಅನುದಾನ ತಿರಸ್ಕರಿಸುವ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದು ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ಮಾರುಕಟ್ಟೆ ವಿಭಾಗದ ಮುಖ್ಯಸ್ಥೆ ಪದ್ಮಶ್ರೀ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೈಮಗ್ಗ ಮತ್ತು ನೈಸರ್ಗಿಕ ಬಣ್ಣಗಾರಿಕೆಯ ಕ್ಷೇತ್ರದಲ್ಲಿ ಚರಕ ಸಂಸ್ಥೆ ಮಾಡಿದ ಸಾಧನೆ ಗಮನಿಸಿದ ರಾಜ್ಯ ಸರ್ಕಾರ 2009ರಲ್ಲಿ ಪವಿತ್ರವಸ್ತ್ರ ಅಭಿಯಾನದ ಭಾಗವಾಗಲು ಆಸಕ್ತಿ ತೋರಿತ್ತು. ಕೈಮಗ್ಗದ ವಸ್ತ್ರಗಳು ದೇಶ, ವಿದೇಶಗಳ ಗ್ರಾಹಕರಿಗೆ ಲಭಿಸಲು, ಉದ್ಯೋಗಾವಕಾಶ ದೊರಕಿಸಲು ನೆರವಾಗುವ ಭರವಸೆ ನೀಡಿತ್ತು.ಸಂಸ್ಥೆ ₹ 55 ಲಕ್ಷ ಹೊಂದಿಸಿತ್ತು. ಸರ್ಕಾರ ₹ 33 ಲಕ್ಷ ಹಣ ಬಿಡುಗಡೆ ಮಾಡುವ ಭರವಸೆ ನೀಡಿತ್ತು. ಮೂರು ವರ್ಷಗಳ ಹಿಂದೆ ಹಣ ಬಿಡುಗಡೆಯಾದ ಹಣ ಸಂಸ್ಥೆಯ ಹೆಸರಿನಲ್ಲಿ ಖಾಸಗಿ ಬ್ಯಾಂಕ್ ಖಾತೆಯಲ್ಲಿ ಇದೆ. ಅಧಿಕಾರಿಗಳು ಹಣ ನೀಡಲು ಅಲೆದಾಡಿಸುತ್ತಲೇ ಇದ್ದಾರೆ. ಸಂಸ್ಥೆ ಹಾಗೂ ಫಲಾನುಭವಿಗಳು ಭ್ರಷ್ಟರಾಗದ ಕಾರಣ ಹಣ ನೀಡಲು ಅಧಿಕಾರಿಗಳು ಮನಸ್ಸು
ಮಾಡದಿರಬಹುದು ಎಂದು
ಆರೋಪ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.