ADVERTISEMENT

ಕೂಸು ಹುಟ್ಟುವ ಮುನ್ನವೇ ಕುಲಾವಿ: ನಾಗರಾಜ್ ಟೀಕೆ

ಈಶ್ವರಪ್ಪ ಹೇಳಿಕೆಗೆ ಕಾಂಗ್ರೆಸ್ ಮುಖಂಡ ನಾಗರಾಜ್ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 5:15 IST
Last Updated 28 ಜೂನ್ 2022, 5:15 IST

ಶಿವಮೊಗ್ಗ: ‘ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸಿದರು’ ಎಂಬಂತೆ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಮುಸ್ಲಿಂ ಮತ ಕೇಳುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವೈ.ಎಚ್.ನಾಗರಾಜ್ ಟೀಕಿಸಿದರು.

‘ಧರ್ಮಗಳ ನಡುವೆ ಭಾವನಾತ್ಮಕವಾಗಿ ಸದಾ ಬ್ಲಾಕ್ ಮೇಲ್ ತಂತ್ರ ಅನುಸರಿಸುತ್ತ ಬಂದಿರುವ ಈಶ್ವರಪ್ಪ ಚುನಾವಣೆ ಇನ್ನೂ ದೂರವಿದ್ದರೂ, ತಮಗೆ ಟಿಕೆಟ್ ಸಿಗುವ ನಂಬಿಕೆ ಇಲ್ಲದಿದ್ದರೂ ಮುಸ್ಲಿಮರ ಮತಗಳನ್ನು ಕೇಳುವುದಿಲ್ಲ ಎಂದು ಹೇಳುವ ಮೂಲಕ ಧರ್ಮಗಳ ನಡುವಿನ ಕಂದಕವನ್ನು ಹೆಚ್ಚಿಸುತ್ತಿದ್ದಾರೆ’ ಎಂದು ಅವರು ಟೀಕಿಸಿದ್ದಾರೆ.

‘ಶಾಸಕರಾಗಿ ಅವರು ತಮಗೆ ಮತ ಹಾಕಿದವರನ್ನಾಗಲೀ, ಹಾಕದೇ ಇರುವವರನ್ನಾಗಲೀ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಆದರೆ, ಮುಸ್ಲಿಮರನ್ನೇ ಪ್ರತ್ಯೇಕವಾಗಿ ನೋಡುವ ಅವರು, ಸೌಲಭ್ಯಗಳನ್ನು ಹೇಗೆ ತಲುಪಿಸುತ್ತಾರೆ. ನಿಮ್ಮ ಮತ ಕೇಳುವುದಿಲ್ಲ. ನಿಮಗೆ ಸೌಲಭ್ಯವನ್ನೂ ನೀಡುವುದಿಲ್ಲ ಎಂದು ಅಪ್ರತ್ಯಕ್ಷವಾಗಿ ಈಶ್ವರಪ್ಪ ಹೇಳುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ಆಕಸ್ಮಾತ್ ಅವರಿಗೆ ಟಿಕೆಟ್ ದೊರೆತು ಚುನಾವಣೆ ಪ್ರಚಾರ ಸಮಯದಲ್ಲಿ ಬೇಕಾದರೆ ಈ ಮಾತು ಹೇಳಲಿ. ಆದರೆ, ಅದನ್ನು ಬಿಟ್ಟು ಇಂತಹ ಗೊಂದಲದ ಹೇಳಿಕೆ ಮನುಷ್ಯ ವಿರೋಧಿಯಾಗಿದೆ. ಒಂದು ವೇಳೆ ಅವರಿಗೆ ಅಥವಾ ಅವರ ಮಗನಿಗೆ ಟಿಕೆಟ್ ಸಿಗದೇ ಬೇರೆ ಯಾರಿಗೋ ಟಿಕೆಟ್ ಸಿಕ್ಕರೆ ಆ ಅಭ್ಯರ್ಥಿಗೆ ಇದರಿಂದ ತೊಂದರೆಯಾಗುತ್ತದೆ ಎಂಬ ಸಣ್ಣ ಅರಿವು ಕೂಡ ಅವರಿಗೆಇದ್ದಂತೆ ಕಾಣುವುದಿಲ್ಲ. ಬಹುಶಃ ನನ್ನ ಬಿಟ್ಟು ಯಾರೇ ಚುನಾವಣೆಗೆ ಸ್ಪರ್ಧಿಸಿದರೂ ಮುಸ್ಲಿಂ ಮತಗಳು ಅವರಿಗೆ ಬರುವುದು ಬೇಡ ಎಂಬ ದೂರದ ಯೋಚನೆಯೂ ಇವರಿಗಿರಬೇಕು’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.