ಶಿವಮೊಗ್ಗ: ವರದಾ ನದಿ ಪ್ರವಾಹದ ಪರಿಣಾಮ ಸೊರಬ ತಾಲ್ಲೂಕಿನ ಲಕ್ಕವಳ್ಳಿಯಲ್ಲಿರುವ ಶ್ರೀಮೋಕ್ಷ ಮಂದಿರ ಸಂಸ್ಥಾನ ಜೈನ ಮಠಕ್ಕೆ ಸಾಕಷ್ಟು ಹಾನಿಯಾಗಿದೆ. ಸರ್ಕಾರ ಪರಿಹಾರ ನೀಡಬೇಕು ಎಂದು ವೃಷಭ ಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಕೋರಿದರು.
ಮಠ, ಅಲ್ಲಿನ ದೇವಸ್ಥಾನ, ಪ್ರೌಢಶಾಲಾ ವಸತಿನಿಲಯ ಕಟ್ಟಡಗಳಿಗೆ ನೀರು ನುಗ್ಗಿದೆ. ಸುಮಾರು 20 ಕಟ್ಟಡಗಳಿಗೆ ಹಾನಿಯಾಗಿದೆ. ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಸರ್ಕಾರ ಮಠದ ಜೀರ್ಣೋದ್ದಾರಕ್ಕೆ ಅನುದಾನ ನೀಡಬೇಕು. ವರದಾ ನದಿಗೆ ತಡೆಗೋಡೆ ನಿರ್ಮಿಸಬೇಕಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಶ್ರೀಕ್ಷೇತ್ರ ವರದಾ, ದಂಡಾವತಿ, ಕಚವಿಹಳ್ಳಗಳ ತ್ರಿವೇಣಿ ಸಂಗಮ. ಕೇವಲ ಜೈನರಲ್ಲದೇ ಎಲ್ಲ ಧರ್ಮದವರು ಮಠಕ್ಕೆ ಬರುತ್ತಾರೆ. ಬಡ ಮಕ್ಕಳಿಗಾಗಿ ಪ್ರೌಢಶಾಲೆ, ಪ್ರಾಥಮಿಕ ಶಾಲೆ ನಡೆಸುತ್ತಿದ್ದೇವೆ. ಎಲ್ಲರಿಗೂ ಉಚಿತ ಶಿಕ್ಷಣವಿದೆ. ಬಸದಿಗಳು, ಧರ್ಮಪೀಠ, ಕುಲದೇವತಾ ಮಂದಿರ, ನವಗ್ರಹ, ಯಾತ್ರಿನಿವಾಸ, ಸಮುದಾಯ ಭವನ ಹೀಗೆ ಸುಮಾರು 20 ಕಟ್ಟಡಗಳು ಇಲ್ಲಿವೆ. ಈಗ ಈ ಐತಿಹಾಸಿಕ, ಧಾರ್ಮಿಕ ಮಠ ಂಪೂರ್ಣ ಹಾಳಾಗಿದೆ. ಪುನರ್ ನಿರ್ಮಾಣಕ್ಕೆ ಕನಿಷ್ಠ ₨ 20 ಕೋಟಿ ಬೇಕಿದೆ. ಜಿಲ್ಲೆಯವರೇ ಆದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಹಾಯ ಮಾಡಬೇಕು ಎಂದು ವಿನಂತಿಸಿದರು.
ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಅಲ್ಪಸಂಖ್ಯಾತ ಜೈನರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಿಲ್ಲ. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಠದ ಅನುಯಾಯಿಗಳಾದ ಮಂಜುನಾಥ್, ಪುರುಷೋತ್ತಮ್, ರಾಮಚಂದ್ರಪ್ಪ, ನಾಗರಾಜ್, ಆನಂದನಾಯ್ಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.