ಶಿವಮೊಗ್ಗ: ರವೀಂದ್ರ ನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಡಿ. 22ರ ಸಂಜೆ 5ಕ್ಕೆ ಪುಸ್ತಕ ಬಿಡುಗಡೆ, ಅಭಿನಂದನೆ, ಯಕ್ಷಗಾನ ಹಮ್ಮಿಕೊಳ್ಳಲಾಗಿದೆ.
ವಿ. ಉಮಾಕಾಂತ ಭಟ್ ಹಾಗೂ ಕೆರೆಕೈ ಅಭಿನಂದನಾ ಸಮಿತಿ ಈ ಕಾರ್ಯಕ್ರಮ ಆಯೋಜಿಸಿದೆ ಎಂದು ಕಾರ್ಯದರ್ಶಿ ಅಚ್ಚುತ ಹೆಬ್ಬಾರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಿದ್ವಾನ್ ಮೇಲುಕೋಟೆ ಉಮಾಕಾಂತ ಭಟ್ಟರು ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳ ಮೇಲೆ ಸಮಪ್ರಭುತ್ವ ಸಾಧಿಸಿದ ವಿದ್ವಾಂಸರು. ಬಹುಮುಖ ಪ್ರತಿಭೆ. `ಛಂದಸ್ವತೀ' ಯಂತಹ ಪದ್ಯ ಪತ್ರಿಕೆ ನಡೆಸಿಕೊಂಡು ಬರುತ್ತಿದ್ದಾರೆ. ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಪಷ್ಟ್ಯಬ್ಧಿ ಸಮಯದಲ್ಲಿ ಅವರನ್ನು ಸನ್ಮಾನಿಸುತ್ತಿದ್ದೇವೆ. ಅಂದು `ಅನ್ವೀಕ್ಷಾ (ಸಂಸ್ಕೃತ)’ ಮತ್ತು ‘ಕಾಂತಶಕ (ಕನ್ನಡ)’ ಅಭಿನಂದನಾ ಗ್ರಂಥಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಆದಿಚುಂಚನಗಿರಿ ಮಧುಸೂದನ ಅಡಿಗ ಅವರು ಪುಸ್ತಕ ಕುರಿತು ಮಾತನಾಡುವರು. ಸಾಲೆಬೈಲು ನಾರಾಯಣಯಾಜಿ ಅವರು ಅಭಿನಂದನಾ ನುಡಿ ನುಡಿಯುವರು. ಯಕ್ಷಗಾನ ಅಕಾಡೆಮಿ ಸದಸ್ಯ ಲಕ್ಷ್ಮೀ ನಾರಾಯಣ ಕಾಶಿ ಅಧ್ಯಕ್ಷತೆ ವಹಿಸುವರು ಎಂದು ವಿವರ ನೀಡಿದರು.
ಕಾರ್ಯಕ್ರಮದ ನಂತರ ‘ಕರ್ಣಪರ್ವ’ ಯಕ್ಷಗಾನ ಪ್ರದರ್ಶನವಿದೆ. ಸುಬ್ರಹ್ಮಣ್ಯ ಧಾರೇಶ್ವರ-ಭಾಗವತರು, ಗಣೇಶಮೂರ್ತಿ ಮದ್ದಲೆ, ಕೃಷ್ಣಮೂರ್ತಿ ನಾಗರಕೊಡಿಗೆ-ಚಂಡೆ ಇರುತ್ತದೆ. ಪಾತ್ರದಾರಿಗಳಾಗಿ ಉಮಾಕಾಂತ ಭಟ್ಟ (ಕರ್ಣ), ಜಬ್ಬಾರ್ (ಸಮೋ-ಶಲ್ಯ), ನಾರಾಯಣ (ಯಾಜಿ-ಕೃಷ್ಣ), ದತ್ತಮೂರ್ತಿ ಭಟ್- (ಅರ್ಜುನ) ಪಾತಧಾರಿಗಳಾಗುತ್ತಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಆ.ಪ. ರಾಮಭಟ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.