ಶಿವಮೊಗ್ಗ: ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ರೈತರುಫೆ.13 ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತಿದೆ.
ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಕೇಂದ್ರ ಸರ್ಕಾರ ಸೂಕ್ತ ನಿಯಮಾವಳಿ ರೂಪಿಸಿ, ಬೆಳೆಹಾನಿ ಪರಿಹಾರ ವತರಿಸಬೇಕು. ಫಸಲ್ ಭಿಮಾ ಯೋಜನೆ ನ್ಯೂನತೆ ಸರಿಪಡಿಸಬೇಕು. ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿ ರೈತ ನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಜನ್ಮದಿನದಂದು ಮುತ್ತಿಗೆ ಹಾಕಲು ಸಂಘ ನಿರ್ಧರಿಸಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಜಿ.ಎ. ಲಕ್ಷ್ಮೀನಾರಾಯಣ ಗೌಡ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಹದಾಯಿ-, ಕಳಸ–ಬಂಡೂರಿ ಯೋಜನೆ ಅನುಷ್ಠಾನಗೊಳ್ಳಬೇಕು. ನ್ಯಾಯಾಧೀಕರಣದ ಆದೇಶದಂತೆ 4 ಟಿಎಂಸಿ ನೀರು ಮಲಪ್ರಭೆಗೆ ಹರಿಸಬೇಕು. ಉದ್ಯೋಗ ಖಾತ್ರಿ ಯೋಜನೆಗೆ ಮತ್ತಷ್ಟು ವಿಸ್ತರಿಸಬೇಕು. ನವಲಗುಂದ, ನರಗುಂದ, ಕುಂದಗೋಳ, ಹುಬ್ಬಳ್ಳಿ, ಧಾರವಾಡ ಮತ್ತಿತರ ಪಟ್ಟಣ ಪ್ರದೇಶಗಳ ಕೃಷಿ ಕಾರ್ಮಿಕರನ್ನೂ ಈ ಯೋಜನೆ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳು ಕೃಷಿಯನ್ನೇ ನಂಬಿರುವ ಕುಟುಂಬಗಳನ್ನು ಂಕಷ್ಟಕ್ಕೆ ಸಿಲುಕಿಸಿವೆ. ಆತ್ಮಹತ್ಯೆ ಪ್ರಕರಣಗಳು ಮುಂದುವರಿದಿವೆ ಎಂದು ದೂರಿದರು.
ಈ ಎಲ್ಲ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿಧಾನಸೌಧ ಮುತ್ತಿಗೆ ಹಾಕಲಾಗುತ್ತಿದೆ. ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದರೆ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಎಚ್.ಬಿ. ಬಸವರಾಜಪ್ಪ, ಸೈಯದ್ ಖಾದಿರ್, ಬಸಪ್ಪ, ಈಶ್ವರಪ್ಪ, ಕುಬೇರಪ್ಪ, ಪುಟ್ಟಯ್ಯ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.