ಶಿವಮೊಗ್ಗ: ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡದ ಹೊರತು ಯಾವುದೇ ಸರ್ಕಾರಿ ಹುದ್ದೆಯ ನೇಮಕಾತಿ ಅಥವಾ ಬಡ್ತಿ ನೀಡಬಾರದು ಎಂದು ಆದಿ ಜಾಂಬವ ಸಂಘದ ಮುಖಂಡ ಬಿ.ಆರ್.ಭಾಸ್ಕರ ಪ್ರಸಾದ್ ಹೇಳಿದರು.
ಆದಿ ಜಾಂಬವ ಸಂಘದ ಕ್ರಾಂತಿಕಾರಿ ರಥಯಾತ್ರೆ ರಾಜ್ಯದಾದ್ಯಂತ ಸಂಚರಿಸುತ್ತಿದೆ. ಈಗ ಶಿವಮೊಗ್ಗ ಜಿಲ್ಲೆಗೂ ಪ್ರವೇಶಿಸಿದೆ ಎಂದ ಅವರು, ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು. ಇದರ ಹಿಂದಿರುವ ಹುನ್ನಾರಗಳನ್ನು ತಡೆಗಟ್ಟಬೇಕು. ಒಳಮೀಸಲಾತಿ ನೀಡದೇ ಯಾವುದೇ ಹುದ್ದೆಗಳ ನೇಮಕ ಮಾಡಿಕೊಳ್ಳಬಾರದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಸುಪ್ರೀಂ ಕೋರ್ಟ್ ತೀರ್ಪಿನಂತೆ ಒಳಮೀಸಲಾತಿ ಜಾರಿ ತೀರ್ಮಾನವನ್ನು ಆಯಾ ರಾಜ್ಯ ಸರ್ಕಾರಗಳು ತೆಗೆದುಕೊಳ್ಳಬೇಕಿದೆ. ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಅದನ್ನು ಮಾಡದೇ ಈಗ ಮತ್ತೆ ಜನಗಣತಿ ಮಾಡಲು ಹೊರಟಿರುವುದು ಸರಿಯಲ್ಲ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾಗಮೋಹನ್ದಾಸ್ ಅವರು ಮತ್ತಷ್ಟು ಸಮಯ ತೆಗೆದುಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ. ಅಲ್ಲದೇ ಸಚಿವ ಮಹಾದೇವಪ್ಪ ಅವರು ಕೂಡ ಇದರ ಹಿಂದಿದ್ದು, ಷಡ್ಯಂತ್ರ ನಡೆಸುತ್ತಿದ್ದಾರೆ. ಇದನ್ನು ನಮ್ಮ ಸಮಾಜ ವಿರೋಧಿಸುತ್ತದೆ’ ಎಂದರು.
ಆದಿ ಜಾಂಬವ ಸಮಾಜದ ರಘುರಾಜ್, ಎಲ್.ಬಿ.ಸುರೇಶ್, ಅಣ್ಣಪ್ಪ ಕೆ., ಎಸ್.ಮಲಿಯಪ್ಪ, ನರಸಪ್ಪ, ಹನುಮಂತಪ್ಪ, ಹಾಲಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.